ಲಕ್ನೋ, ನ.11: ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಬಾಗಿಲಲ್ಲಿ ನಿಂತಿದ್ದ 70 ವರ್ಷದ ನಿವೃತ್ತ ಶಿಕ್ಷಕನೊಬ್ಬ ಸಮತೋಲನವನ್ನು ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾನೆ.
ನಗರದ ಹೊರವಲಯದಲ್ಲಿರುವ ಮೋಹನ್ ಲಾಲ್ ಗಂಜ್ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಮೃತರನ್ನು ಚಂದ್ರ ಪ್ರಸಾದ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಪಿಂಚಣಿಗೆ ಸಂಬಂಧಿಸಿದ ಕೆಲಸಕ್ಕಾಗಿ ಶಿಕ್ಷಣ ಇಲಾಖೆಯನ್ನು ಭೇಟಿ ಮಾಡಲು ಸಿಸೆಂಡಿಯಿಂದ ಕೈಸರ್ಬಾಗ್ ಗೆ ಬಸ್ ಹತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಹಪ್ರಯಾಣಿಕರ ಪ್ರಕಾರ, ಬಸ್ ಕಿಕ್ಕಿರಿದು ತುಂಬಿದ್ದರಿಂದ ನಿವೃತ್ತ ಶಿಕ್ಷಕ ದ್ವಾರದಲ್ಲಿ ನಿಲ್ಲಬೇಕಾಯಿತು ಎಂದು ಮೋಹನ್ ಲಾಲ್ ಗಂಜ್ ನ ಸ್ಟೇಷನ್ ಹೌಸ್ ಆಫೀಸರ್ (ಎಸ್ ಎಚ್ ಒ) ಕುಲದೀಪ್ ದುಬೆ ಹೇಳಿದ್ದಾರೆ.
“ಕೆಲವು ಪ್ರಯಾಣಿಕರು ಬಸ್ ನಿಲ್ಲಿಸಲು ಕೇಳಿದಾಗ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದನು. ಶಿಕ್ಷಕರು ಸಮತೋಲನವನ್ನು ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರ ಗಾಯಗಳಾಗಿವೆ” ಎಂದು ಎಸ್ಎಚ್ಒ ಹೇಳಿದ್ದಾರೆ.
ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಸಾವನ್ನಪ್ಪಿದ್ದಾರೆ.