ಉತ್ತರ ಪ್ರದೇಶ: ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ ಶ್ರೀಗಳು , ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆಯುತ್ತಿದ್ದು ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಗೆಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ . ಮಂದಿರದ ಲೋಕಾರ್ಪಣೆಯ ವೇಳೆಗೆ ದೇಶಾದ್ಯಂತದಿಂದ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ 25000 ಜನರ ವಸತಿ ಸಾಮರ್ಥ್ಯದ ಬೃಹತ್ ಯಾತ್ರಿ ಭವನ ನಿರ್ಮಿಸಲಾಗುತ್ತಿದೆ ಎಂದರು.
ಶಿಲೆಗಳ ಪರಿಶೀಲನೆ:
ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ರಾಮ ಲಕ್ಷ್ಮಣ ಸೀತೆಯ ವಿಗ್ರಹಗಳ ನಿರ್ಮಾಣಕ್ಕಾಗಿ ಕರ್ನಾಟಕದ ಹೆಗ್ಗಡೆ ದೇವನಕೋಟೆ , ಕಾರ್ಕಳ ,ತಮಿಳುನಾಡಿನ ಮಹಾಬಲಿ ಪುರಂ , ರಾಜಸ್ಥಾನ ಹಾಗೂ ನೇಪಾಳಗಳಿಂದ ಶಿಲೆಗಳನ್ನು ತರಲಾಗಿದ್ದು ಶಿಲ್ಪಿಗಳು ಅವುಗಳ ಪರಿಶೀಲನೆ ನಡೆಸಿ ಉತ್ತಮವಾದವುಗಳನ್ನು ಆಯ್ದುಕೊಂಡು ಪ್ರತಿಮೆಗಳನ್ನು ನಿರ್ಮಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ಮುಖಂಡ ಗೋಪಾಲ್ ಜೀ , ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್ , ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಉಪಸ್ಥಿತರಿದ್ದರು .