ಉತ್ತರ ಪ್ರದೇಶ: ಯಾವುದೋ ಕ್ಷುಲ್ಲಕ ಕಾರಣದಿಂದಾಗಿ ದುಡುಕಿ ವಿಚ್ಛೇದನ ಪಡೆದುಕೊಂಡಿದ್ದ ಜೋಡಿಯೊಂದು ಐದು ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಮರು ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಅಪರೂಪದ ಪ್ರೇಮಕಥೆಯನ್ನು ಕಂಡ ಹಲವರು ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ ಎಂದು ಹೇಳಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದ್ದು, ಇಲ್ಲಿನ ವಿನಯ್ ಜೈಸ್ವಾಲ್ ಎಂಬವರು ತಮ್ಮ ಮಾಜಿ ಪತ್ನಿ ಪೂಜಾ ಚೌದರಿಯವರನ್ನು ವಿಚ್ಛೇದನ ಪಡೆದ ಐದು ವರ್ಷಗಳ ಬಳಿಕ ಮತ್ತೊಮ್ಮೆ ಮರು ಮದುವೆಯಾಗಿದ್ದಾರೆ. 2012 ನೇ ಇಸವಿಯಲ್ಲಿ ಇವರಿಬ್ಬರಿಗೂ ಮದುವೆಯಾಗಿತ್ತು. ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಹಾಗೂ ಕೆಲವೊಂದು ಮನಸ್ತಾಪಗಳ ಕಾರಣದಿಂದಾಗಿ 2018 ರಲ್ಲಿ ಇಬ್ಬರೂ ವಿಚ್ಛೇದನವನ್ನು ಪಡೆದುಕೊಂಡು ತಮ್ಮ ಪತಿ ಪತ್ನಿ ಸಂಬಂಧಕ್ಕೆ ಎಳ್ಳುನೀರು ಬಿಡುತ್ತಾರೆ. ಆದರೆ ಇದೀಗ ಐದು ವರ್ಷಗಳ ಬಳಿಕ ಡಿವೋರ್ಸ್ ಪಡೆದುಕೊಂಡಿದ್ದ ಈ ಜೋಡಿ, ಮತ್ತೊಮ್ಮೆ ಒಂದಾಗಿದ್ದಾರೆ. ಈ ಅಪರೂಪದ ಪ್ರೇಮಕತೆಯನ್ನು ಸ್ವತಃ ವಿನಯ್ ಜೈಸ್ವಾಲ್ ಅವರು ತಮ್ಮ ಪೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೇ ವರ್ಷ 2023 ರಲ್ಲಿ ವಿನಯ್ ಅವರಿಗೆ ಹೃದಯಾಘಾತವಾಗಿತ್ತು, ಅಲ್ಲದೆ ಈ ಕಾರಣದಿಂದ ಅವರು ಓಪನ್ ಸರ್ಜರಿಗೂ ಕೂಡಾ ಒಳಗಾಗಿದ್ದರು. ಈ ವಿಷಯ ತಿಳಿದ ತಕ್ಷಣ ಮಾಜಿ ಪತ್ನಿ ಪೂಜಾ ತಮ್ಮ ಕೋಪತಾಪವನ್ನೆಲ್ಲಾ ಬದಿಗಿಟ್ಟು ಓಡೋಡಿ ಬಂದು ವಿನಯ್ ಅವರ ಕಷ್ಟಕಾಲದಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ನಮ್ಮಿಬ್ಬರ ನಡುವಿನ ಮನಸ್ತಾಪದ ಗೋಡೆ ಮಂಜಿನಂತೆ ಕರಗಿ ಹೋಗಲು ಹೃದಯಾಘಾತ ಕೂಡಾ ಒಂದು ಮುಖ್ಯ ಕಾರಣ, ಈಗ ನಮ್ಮಿಬ್ಬರ ನಡುವೆ ಇದ್ದ ಮನಸ್ತಾಪಗಳೆಲ್ಲಾ ದೂರವಾಗಿ ಮನಸ್ಪೂರ್ವಕವಾಗಿ ಮರು ಮದುವೆಯಾಗಿದ್ದೇವೆ ಎಂದು ವಿನಯ್ ಬರೆದುಕೊಂಡಿದ್ದಾರೆ.