ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು 2008ರ ಮಾಲೆಗಾಂವ್ ಸ್ಫೋಟದ ಕುರಿತು ವಿಚಾರಣೆ ನಡೆಸುತ್ತಿದೆ. ಇದೀಗ, ಪ್ರಕರಣದ ಸಾಕ್ಷಿಯೊಬ್ಬರು ಅಂದಿನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ವಿರುದ್ಧ ನ್ಯಾಯಾಲಯದೆದುರು ಗಂಭೀರ ಆರೋಪ ಮಾಡಿದ್ದಾರೆ.
ಮಾಲೆಗಾಂವ್ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ ಹಾಗೂ ಆರೆಸ್ಸೆಸ್ ಗೆ ಸೇರಿದ ಇನ್ನು ನಾಲ್ವರನ್ನು ಹೆಸರಿಸುವುದಕ್ಕೆ ತಮ್ಮನ್ನುಹಿಂಸೆಗೆ ಒಳಪಡಿಸಲಾಗಿತ್ತು ಎಂದು ಸಾಕ್ಷಿ ಹೇಳುತ್ತಿದ್ದ ವ್ಯಕ್ತಿ ಆರೋಪಿಸಿದ್ದಾರೆ.
ರಿಪಬ್ಲಿಕ್ ಟಿವಿ ವರದಿ ಮಾಡಿರುವ ಪ್ರಕಾರ, ಸ್ವಾಮಿ ಅಸೀಮಾನಂದ, ಇಂದ್ರೇಶ ಕುಮಾರ, ಕಾಕಾಜಿ ಮತ್ತು ದೇವಧರಜೀ ಅವರ ಹೆಸರುಗಳನ್ನು ತೆಗೆದುಕೊಳ್ಳುವುದಕ್ಕೆ ಸಾಕ್ಷಿಯ ಮೇಲೆ ಒತ್ತಡ ಹೇರಲಾಗಿತ್ತು.
ಯುಪಿಎ ಸರ್ಕಾರದ ಅವಧಿಯಲ್ಲಿ ಮಾಲೆಗಾಂವ್ ಸ್ಫೋಟದ ಸಂಬಂಧ ಶುರುವಾದ ತನಿಖೆಗಳು ಅದಾಗಲೇ ವ್ಯಾಪಕ ಸಂದೇಹ ಮತ್ತು ಟೀಕೆಗಳನ್ನು ಹುಟ್ಟುಹಾಕಿದ್ದವು. ‘ಹಿಂದು ಭಯೋತ್ಪಾದನೆ’ ಎಂಬುದೊಂದಿದೆ ಎಂದು ಸಾಬೀತುಪಡಿಸಲೆಂದೇ ತನಿಖೆಯ ದಿಕ್ಕು ಸಾಗಿತ್ತು ಎಂಬ ಬಗ್ಗೆ ಅದಾಗಲೇ ಹಲವು ಆರೋಪಗಳು ಕೇಳಿಬಂದಿದ್ದವು. ಇದೀಗ ನ್ಯಾಯಾಲಯದ ಎದುರು ಸಾಕ್ಷಿಯ ಹೇಳಿಕೆ ಹೊಸ ಸೇರ್ಪಡೆ ಅಷ್ಟೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿ ಆರ್ ವಿ ಎಸ್ ಮಣಿ ಎಂಬುವವರು ಈ ಹಿಂದೆ ತಮ್ಮ ಸಂದರ್ಶನ ಮತ್ತು ಬರಹಗಳ ಮೂಲಕ ಮಾಲೆಗಾಂವ್, ಸಮಜೋತಾ, ಬಾಟ್ಲಾ ಹೌಸ್ ಎನ್ಕೌಂಟರ್ ಇಲ್ಲೆಲ್ಲ ಕೇಸರಿ ಭಯೋತ್ಪಾದನೆ ಇದೆ ಎಂದು ನಿರೂಪಿಸುವುದಕ್ಕೆ ಸರ್ಕಾರ ಭಾರಿ ಪ್ರಯತ್ನ ಮಾಡಿತ್ತು ಎಂಬುದನ್ನು ಜಾಹೀರಾಗಿಸಿದ್ದರು.
2008 Malegaon blast case | A witness tells Special NIA court that he was tortured by ATS, the then probe agency of the case. He also told the court that ATS forced him to falsely name Yogi Adityanath and 4 other people from RSS.
— ANI (@ANI) December 28, 2021