ಉತ್ತರ ಪ್ರದೇಶ: ಪ್ರಸುತ್ತ ಇದೀಗ ಎಲ್ಲೆಡೆ ಧಾರ್ಮಿಕ ಮೆರವಣಿಗೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಗಲಭೆ ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯೋಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಇನ್ನು ಮುಂಬರುವ ಹಬ್ಬಗಳಾದ ಅಕ್ಷಯ ತೃತೀಯ ಹಾಗೂ ಮುಸ್ಲಿಮರ ಪವಿತ್ರ ರಂಜಾನ್ ಎರಡು ಪ್ರಮುಖ ಹಬ್ಬಗಳು ಇರಲಿವೆ ಹಾಗಾಗಿ ಉದ್ವಿಗ್ನತೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ನೀಡಲು ಮತ್ತು ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ಯುಪಿ ಸಿಎಂ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ.
ಧಾರ್ಮಿಕ ಮೆರವಣಿಗೆ ನಡೆಸುವ ಮುನ್ನ ಆಯೋಜಕರು ಅಫಿಡವಿಟ್ ಸಲ್ಲಿಸುವುದು ಕಡ್ಡಾಯ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ರಂಜಾನ್ ಮತ್ತು ಅಕ್ಷಯ ತೃತೀಯ ಹಬ್ಬಗಳು ಒಂದೇ ದಿನ ಬರಲಿದ್ದು ಮುನ್ನೆಚ್ಚರಿಕೆ ವಹಿಸಬೇಕು . ದೆಹಲಿಯ ಜಾಹೀಗಿರ್ಪುರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋಮು ಘರ್ಷಣೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು ಆಯೋಜಕರಿಗೆ ಧಾರ್ಮಿಕ ಮೆರವಣಿಗೆ ಅವಕಾಶ ನೀಡುವ ಮುನ್ನ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ಬಗ್ಗೆ ಅಫಿಡೆವಿಟ್ ಪಡೆದುಕೊಳ್ಳಬೇಕು. ಹಿಂದಿನಿಂದ ಬಂದಿರುವ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರ ಅವಕಾಶ ನೀಡಬೇಕು. ಹೊಸ ಸಂಪ್ರದಾಯ ಅಥವಾ ಆಚರಣೆಗಳಿಗೆ ಅನುವು ಮಾಡಿಕೊಡಬಾರದು ಎಂದು ಅವರು ತಿಳಿಸಿದ್ದಾರೆ.
ಯಾರೇ ಆದರೂ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಮತ್ತು ನಿಗದಿತ ಸ್ಥಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆಗಳು ನಡೆಯುವಂತೆ ನೋಡಿಕೊಳ್ಳಿ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ, ಮುಂದಿನ 24 ಗಂಟೆಯಲ್ಲಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಧಾರ್ಮಿಕ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸುವಂತೆಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಸರ್ಕಾರಿ ರಜಾ ದಿನದಂದು ಎಲ್ಲ ಪೊಲೀಸ್ ಅಧಿಕಾರಿಗಳ ರಜೆ ರದ್ದು ಮಾಡಲಾಗಿದೆ.