ಗೋರಖ್ಪುರ : ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಗಂಡಕ್ ನದಿಯಲ್ಲಿ ದೋಣಿಯೊಂದು ಮುಳುಗಿ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ (ಎ.13) ನಡೆದಿದೆ.
ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಏಳು ಮಂದಿಯನ್ನು ರಕ್ಷಿಸಲಾಗಿದೆ ಎಂದು ಕುಶಿನಗರದ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್ ತಿಳಿಸಿದ್ದಾರೆ. ಮೃತರಾದ ಅಸ್ಮಾ ಖಾತೂನ್(38),ಗುಡಿಯಾ(17)ಮತ್ತು ಸೋನಿ(16)ಎಂದು ಗುರುತಿಸಲಾಗಿದ್ದು, ಎಲ್ಲರೂ ಪನಿಯಾಹ್ವಾ ಪ್ರದೇಶದವರಾಗಿದ್ದಾರೆ.
10 ಜನರು ದೋಣಿಯಲ್ಲಿ ನದಿಯ ದಡದಾಚೆ ಹೊಲಯೊಂದರಲ್ಲಿ ಗೋಧಿ ಕೊಯ್ಲಿಗೆ ಹೋಗುತ್ತಿದ್ದಾಗ ನೀರಿನ ರಭಸಕ್ಕೆ ದೋಣಿ ಮುಗುಚಿ ಬಿದ್ದಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನದಿ ದಾಟಲು ಜನರಿಗೆ ಅನುಮತಿ ಇಲ್ಲದಿದ್ದರೂ ಕೃಷಿ ಕಾರ್ಯಕ್ಕಾಗಿ ಇಲ್ಲಿನ ಜನರು ದೋಣಿಗಳನ್ನು ಬಳಸುತ್ತಾರೆ ಎಂದ ಪೊಲೀಸ್ ವರಿಷ್ಠಾಧಿಕಾರಿ. ಘಟನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಪರಿಹಾರವನ್ನು ಕಂಡು ಹಿಡಿಯಲು ನಾವು ಸರಕಾರಕ್ಕೆ ಕೆಲವು ಸಲಹೆಗಳನ್ನು ಕಳುಹಿಸುತ್ತೇವೆ ಎಂದು ಹೇಳಿದರು.
ಸಂತಾಪ:
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವೀಟರ್ ನಲ್ಲಿ ಮೂವರ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.