ಉತ್ತರ ಪ್ರದೇಶ: “ಅಹ್ಮದಾಬಾದ್ ಸ್ಫೋಟಕ್ಕೆ ಕಾರಣರಾದ ಇಂಡಿಯನ್ ಮುಜಾಹಿದ್ದೀನ್ನ ಪಾತಕಿಗಳು ಪಾತಾಳದಲ್ಲೇ ಅಡಗಿದ್ದರೂ ನಾನು ಬಿಡುತ್ತಿರಲಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “2008ರಲ್ಲಿ ಈ ಘಟನೆ ನಡೆದಾಗ ಅಹ್ಮದಾಬಾದ್ನ ಮಣ್ಣು ಜನರ ರಕ್ತದಲ್ಲಿ ತೊಯ್ದು ಹೋಗಿತ್ತು.ಅಹ್ಮದಾಬಾದ್ ಕೋರ್ಟ್ನಲ್ಲಿ ಈ ಪ್ರಕರಣ ವಿಚಾರಣೆಯಲ್ಲಿದ್ದಿದ್ದರಿಂದ ಈವರೆಗೆ ನಾನು ಮಾತನಾಡಿರಲಿಲ್ಲ” ಎಂದು ಹೇಳಿದರು.
ಆಗ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಸ್ಫೋಟ ನಡೆದಾಗ ರಕ್ತಸಿಕ್ತ ಮಣ್ಣನ್ನು ಕೈಯ್ಯಲ್ಲಿ ಹಿಡಿದ ನಾನು, ಈ ದೃಷ್ಕೃತ್ಯದ ಹಿಂದಿನ ಪಾತಕಿಗಳು ಪಾತಾಳದಲ್ಲೇ ಅಡಗಿದ್ದರೂ ನಾನು ಅವರನ್ನು ಬಿಡದೆ ಶಿಕ್ಷಿಸುತ್ತೇನೆಂದು ಶಪಥ ಮಾಡಿದೆ.
ಇದೇ ವೇಳೆ, ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, “”2007ರಲ್ಲಿ ಅಯೋಧ್ಯೆ ಹಾಗೂ ಲಕ್ನೋದಲ್ಲಿ ಸ್ಫೋಟಗಳಾದವು. 2013ರಲ್ಲಿ ಉತ್ತರ ಪ್ರದೇಶ ಆಳುತ್ತಿದ್ದ ಸಮಾಜವಾದಿ ಪಕ್ಷ ಆ ಸ್ಫೋಟಗಳ ಆರೋಪಿಯಾಗಿ ತಾರೀಖ್ ಕಜ್ಮಿ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಿತು. ಆದರೆ, ನ್ಯಾಯಾಲಯ ಅದಕ್ಕೆ ಅವಕಾಶ ಕೊಡದೆ ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು” ಎಂದರು.
“ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ನಡೆದಿದ್ದ ಉಗ್ರರ ದಾಳಿಗಳಿಗೆ ಸಂಬಂಧಿಸಿದ 14 ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿತ್ತು. ಆ ಮೂಲಕ ಆ ಪ್ರಕರಣಗಳಲ್ಲಿನ ಆರೋಪಿಗಳು ವಿಚಾರಣೆಗೊಳಪಡಲು ಆ ಪಕ್ಷ ಅವಕಾಶವನ್ನೇ ನೀಡಲಿಲ್ಲ. ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಆ ಪಕ್ಷ ಉಗ್ರರಿಗೆ ರಿಟರ್ನ್ ಗಿಫ್ಟ್ ನೀಡಿದೆ” ಎಂದು ಆರೋಪಿಸಿದರು.
ಇಡೀ ಪ್ರಕರಣದ ಹಿಂದಿನ ಸತ್ಯಾಸತ್ಯಗಳನ್ನು ಮಾಧ್ಯಮಗಳು ಬಯಲು ಮಾಡಬೇಕು ಎಂದು ಅವರು ಕರೆ ನೀಡಿದರು.