ನವದೆಹಲಿ: ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ಮಾರ್ಪಡಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಟ್ರಕ್, ಬಸ್ ಚಾಲಕರು ಪ್ರತಿಭಟನೆ ಮುಂದುವರೆದಿದೆ. ಪರಿಣಾಮ, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದ ಮಹಾರಾಷ್ಟ್ರ, ಛತ್ತೀಸ್ಗಢ, ಮಧ್ಯಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳ ಪೆಟ್ರೋಲ್ ಬಂಕ್ ಮುಂದೆ ವಾಹನ ಸವಾರರು ಸರದಿಗಟ್ಟಲೆ ಸಾಲು ನಿಂತು ಇಂಧನ ಖರೀದಿಸುತ್ತಿದ್ದಾರೆ.
ಈ ಮೊದಲು ಗುದ್ದೋಡು ಪ್ರಕರಣಕ್ಕೆ ಚಾಲಕರಿಗೆ 2 ವರ್ಷಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಲು ಐಪಿಸಿ ಸೆಕ್ಷನ್ ಕಾನೂನಿನಲ್ಲಿ ಅವಕಾಶವಿತ್ತು. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್ನ ಅಪರಾಧ ಸಂಹಿತೆ ಕಾನೂನನ್ನು ಈಗ ಮಾರ್ಪಡಿಸಲಾಗಿದ್ದು, ನೂತನ ಕಾನೂನಿನ ಅನ್ವಯ ಗುದ್ದೋಡು(ಹಿಟ್ ಅಂಡ್ ರನ್ ಕೇಸ್) ಪ್ರಕರಣದಲ್ಲಿ ಚಾಲಕರಿಗೆ ಗರಿಷ್ಠ 10 ವರ್ಷಗಳವರೆಗೂ ಶಿಕ್ಷೆ ಹಾಗೂ 7 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ.
ನೂತನ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಟ್ರಕ್ ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಭಟನೆಯಿಂದಾಗಿ ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದೆ. ಥಾಣೆ, ಸೋಲಾಪುರ, ಕೊಲ್ಹಾಪುರ, ನಾಗ್ಪುರ ಹಾಗೂ ಗುಂಡಿಯಾ ಜಿಲ್ಲೆಗಳಲ್ಲಿ ಟ್ರಕ್ ಚಾಲಕರು ಸ್ಥಳೀಯ ಹೆದ್ದಾರಿಗಳ ರಸ್ತೆಗಳನ್ನು ತಡೆದಿದ್ದಾರೆ.
ಛತ್ತೀಸ್ಗಢದಲ್ಲಿ 12 ಸಾವಿರಕ್ಕೂ ಖಾಸಗಿ ವಾಣಿಜ್ಯ ಸೇವೆಯ ಬಸ್ ಚಾಲಕರು ಕೆಲಸವನ್ನು ಸೋಮವಾರದಿಂದ ಸ್ಥಗಿತಗೊಳಿಸಿ ನೂತನ ಕಾನೂನನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು, ಹೊಸ ಕಾನೂನನ್ನು ಹಿಂಪಡೆಯಬೇಕೆಂದು ಇಂದು ಬೆಳಗಿನಿಂದಲೇ ಹಲವು ಜಿಲ್ಲೆಗಳಲ್ಲಿ ಟ್ರಕ್, ಬಸ್ ಚಾಲಕರ ಪ್ರತಿಭಟನೆ ಜೋರಾಗಿದ್ದು, ಹಲವು ಕಡೆ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.