ಹೈದರಾಬಾದ್, ಏ.5: ಡಾ.ಬಿ.ಆರ್.ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಅವರ ಜನ್ಮದಿನವಾದ ಏಪ್ರಿಲ್ 14ರಂದು ಹೈದರಾಬಾದ್ ನಲ್ಲಿ ಅನಾವರಣಗೊಳಿಸಲಾಗುವುದು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನಗರದ ಹೃದಯಭಾಗದಲ್ಲಿರುವ ಹುಸೇನ್ ಸಾಗರ್ ಸರೋವರದ ಬಳಿ ಅಂಬೇಡ್ಕರ್ ಅವರ ಅತಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸರ್ಕಾರ ಆಹ್ವಾನಿಸಿದೆ.
ಭಾರತೀಯ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲು ಅನಾವರಣದ ಸಮಯದಲ್ಲಿ ಪ್ರತಿಮೆಯ ಮೇಲೆ ವಿಶೇಷ ಹೆಲಿಕಾಪ್ಟರ್ ನಿಂದ ಹೂವುಗಳನ್ನು ಸುರಿಸಲಾಗುವುದು. ಸಮಾರಂಭಕ್ಕೆ ಬೌದ್ಧ ಸನ್ಯಾಸಿಗಳನ್ನು ಮಾತ್ರ ಆಹ್ವಾನಿಸಲಾಗುವುದು.
ಅನಾವರಣ ಸಮಾರಂಭದ ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಮುಖ್ಯಮಂತ್ರಿ ಕೆಸಿಆರ್, ಪ್ರಕಾಶ್ ಅಂಬೇಡ್ಕರ್ ಮತ್ತು ರಾಜ್ಯ ಕಲ್ಯಾಣ ಸಚಿವ ಕೊಪ್ಪುಲ ಈಶ್ವರ್ ಅವರು ಭಾಷಣ ಮಾಡಲಿದ್ದಾರೆ.
ಎಲ್ಲಾ 119 ಕ್ಷೇತ್ರಗಳಿಂದ 35,700 ಜನರು ಮತ್ತು ಪ್ರತಿ ಕ್ಷೇತ್ರದಿಂದ 300 ಜನರು ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು. ರಸ್ತೆ ಸಾರಿಗೆ ನಿಗಮದ ಒಟ್ಟು 750 ಬಸ್ಸುಗಳನ್ನು ಕಾಯ್ದಿರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಒಂದು ಲಕ್ಷ ಸಿಹಿ ಪ್ಯಾಕೆಟ್ ಗಳು, ಒಂದೂವರೆ ಲಕ್ಷ ಮಜ್ಜಿಗೆ ಪ್ಯಾಕೆಟ್ ಮತ್ತು ನೀರಿನ ಪ್ಯಾಕೆಟ್ ಗಳನ್ನು ವಿತರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.