ಹೈದರಾಬಾದ್: ಕಳೆದ ವಾರ ಹೈದರಾಬಾದ್ನಲ್ಲಿದ್ದ ಫಾಕ್ಸ್ಕಾನ್ ಅಧ್ಯಕ್ಷ ಯಂಗ್ ಲಿಯು ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಪತ್ರ ಬರೆದಿದ್ದು, ತೆಲಂಗಾಣದಲ್ಲಿ ತನ್ನ ಸ್ಥಾವರವನ್ನು ಸ್ಥಾಪಿಸಲು ಬದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಮಾರ್ಚ್ 2 ರಂದು ತೆಲಂಗಾಣ ಸಿಎಂ ಅವರೊಂದಿಗೆ ಚರ್ಚಿಸಿದಂತೆ, ಕೊಂಗರ ಕಲಾನ್ನಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಫಾಕ್ಸ್ಕಾನ್ ಬದ್ಧವಾಗಿದೆ ಮತ್ತು ಕೊಂಗರ ಕಲಾನ್ ಪಾರ್ಕ್ ಅನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಸರ್ಕಾರದ ಅಗತ್ಯ ಬೆಂಬಲದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಹೈದರಾಬಾದ್ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಕೊಂಗರ ಕಲಾನ್ನಲ್ಲಿ ಸ್ಥಾವರವನ್ನು ಸ್ಥಾಪಿಸಲು ಫಾಕ್ಸ್ಕಾನ್ಗೆ ರಾಜ್ಯ ಸರ್ಕಾರ 200 ಎಕರೆ ಭೂಮಿಯನ್ನು ನೀಡಿದೆ ಎಂದು ವರದಿಯಾಗಿದೆ. ಕೆಸಿಆರ್ ಅವರು ತೈವಾನ್ಗೆ ಭೇಟಿ ನೀಡುವಂತೆ ಲಿಯು ಆಹ್ವಾನಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಕಚೇರಿ ಸಿಎಂಒ ಬಿಡುಗಡೆ ಮಾಡಿದೆ.
ಫಾಕ್ಸ್ಕಾನ್ ಭಾರತದಲ್ಲಿ ಯಾವುದೇ ಹೂಡಿಕೆಗಳನ್ನು ಮಾಡುವುದಿಲ್ಲ ಎಂಬ ವರದಿಗಳ ಮಧ್ಯೆ ಈ ಹೇಳಿಕೆ ಹೊರಬಂದಿರುವುದು ಪ್ರಾಮುಖ್ಯತೆ ಪಡೆದಿದೆ. ಹೈದರಾಬಾದ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ತನಗೆ ಮತ್ತು ತನ್ನ ತಂಡಕ್ಕೆ ನೀಡಿದ ಆತಿಥ್ಯಕ್ಕಾಗಿ ಕೆಸಿಆರ್ಗೆ ಫಾಕ್ಸ್ಕಾನ್ ಅಧ್ಯಕ್ಷ ಧನ್ಯವಾದ ತಿಳಿಸಿದ್ದಾರೆ. “ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮತೆಲಂಗಾಣದ ಪರಿವರ್ತನೆ ಮತ್ತು ಅಭಿವೃದ್ಧಿಯ ಪ್ರಯತ್ನಗಳಿಂದ ಸ್ಫೂರ್ತಿ ಪಡೆದಿದ್ದೇನೆ. ನನಗೆ ಭಾರತದಲ್ಲಿ ಹೊಸ ಸ್ನೇಹಿತ ದೊರೆತಂತಾಗಿದೆ. ನಾನು ಭವಿಷ್ಯದಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಲಿಯು ತಿಳಿಸಿದ್ದಾರೆ.