ಹೈದರಾಬಾದ್: ಜನರು ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಗೆಲ್ಲುವುದು ಮಾತ್ರ ಬಿಜೆಪಿಯೇ ಎಂಬ ತೆಲಂಗಾಣ ಬಿಜೆಪಿ ಸಂಸದ ಡಿ.ಅರವಿಂದ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷ ಈ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದೆ.
ತೆಲಂಗಾಣ ಬಿಜೆಪಿ ಸಂಸದ ಅರವಿಂದ್ ತಮ್ಮ ಕ್ಷೇತ್ರ ನಿಜಾಮಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ನೀವು ನೋಟಾಗೆ ಮತ ಹಾಕಿದರೆ ನಾನು ಗೆಲ್ಲುತ್ತೇನೆ. ‘ಕಾರ’ಕ್ಕೆ (ಬಿಆರ್ ಎಸ್) ಮತ ಹಾಕಿದರೆ ನಾನೇ ಗೆಲ್ಲುತ್ತೇನೆ. ‘ಕೈ’ಗೆ (ಕಾಂಗ್ರೆಸ್) ಮತ ಹಾಕಿದರೆ ‘ಕಮಲ್’ (ಬಿಜೆಪಿ) ಗೆಲ್ಲುತ್ತದೆ ಎಂದು ಹೇಳಿದ್ದರು. ಅರವಿಂದ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಆರ್ಎಸ್, ಭಾರತೀಯ ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಬಿಆರ್ಎಸ್ ನಾಯಕಿ ಕೆ.ಕವಿತಾ ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಸಂಶೋಧನಾ ಪ್ರಬಂಧವು ಈಗಾಗಲೇ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಟ್ಯಾಂಪರಿಂಗ್ ಬಗ್ಗೆ ದೇಶದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಈಗ ಸಂಸದರೊಬ್ಬರು ಇಂತಹ ಹೇಳಿಕೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ಭಾರತ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.