ತಮಿಳುನಾಡು: ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೆ ನಟ ವಿಶಾಲ್ ಸಹ ತಮ್ಮದೇ ರಾಜಕೀಯ ಪಕ್ಷ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಬಗ್ಗೆ ವಿಶಾಲ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಬಹಿರಂಗ ಪತ್ರ ಬರೆದಿರುವ ನಟ ವಿಶಾಲ್, “ನಾನು ಎಂದೂ ಸಹ ರಾಜಕೀಯವನ್ನು ಲಾಭ ಮಾಡುವ ಉದ್ಯಮವಾಗಿ ನೋಡಿಲ್ಲ. ನಾನು ಪ್ರಸ್ತುತ ರಾಜಕೀಯ ಪ್ರವೇಶ ಮಾಡುತ್ತಿಲ್ಲ. ಆದರೆ ಪ್ರಕೃತಿ ಬಯಸಿದರೆ ಭವಿಷ್ಯದಲ್ಲಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬರಬಹುದು” ಎಂದಿದ್ದಾರೆ. ಆ ಮೂಲಕ ಈ ಬಾರಿಯ ಲೋಕಸಭೆ ಚುನಾವಣೆಯಿಂದ ದೂರ ಉಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ, ಜೊತೆಗೆ ವಿಜಯ್ ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆಂದು ಪರೋಕ್ಷವಾಗಿ ಹೇಳಿದ್ದಾರೆ.
ತಮ್ಮ ಅಭಿಮಾನಿಗಳಿಗೆ, ತಮಿಳು ಜನರಿಗೆ ಪತ್ರದಲ್ಲಿ ಧನ್ಯವಾದ ಹೇಳಿರುವ ವಿಶಾಲ್, ಇಷ್ಟು ವರ್ಷ ತಮಗೆ ಬೆನ್ನೆಲುಬಾಗಿ ಇದ್ದಿದ್ದಕ್ಕೆ, ತಮ್ಮ ಅಭಿಮಾನಿ ಸಂಘಗಳನ್ನು ಸಾಮಾಜಿಕ ಸಂಘಗಳಾಗಿ ಬದಲಾಯಿಸಿ ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಜನರಿಗೆ ಸಮಸ್ಯೆ ಆದಾಗ ಧ್ವನಿ ಎತ್ತಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಸಹ ವಿಶಾಲ್ ಹೇಳಿದ್ದಾರೆ.