ಚೆನ್ನೈ: ಚೆನ್ನೈನ ರಾಜಭವನದ ಗೇಟ್ ಮುಂಭಾಗ ಪೆಟ್ರೋಲ್ ಬಾಂಬ್ ಎಸೆಯಲು ಮುಂದಾದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ವ್ಯಕ್ತಿ ಕೆಲವು ತಿಂಗಳ ಹಿಂದೆ ನಗರದ ಬಿಜೆಪಿ ಕಚೇರಿಯ ಹೊರಗೆ ಕೂಡ ಇದೇ ಕೃತ್ಯಕ್ಕೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ 2.45ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾಜ್ಯಪಾಲ ಆರ್.ಎನ್.ರವಿ ಅವರು ವಾಸ್ತವ್ಯವಿರುವ ರಾಜಭವನದ ಮುಖ್ಯ ಗೇಟ್ ಬಳಿ ವ್ಯಕ್ತಿ ಬಾಂಬ್ ಎಸೆಯಲು ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃತ್ಯ ಎಸಗಿರುವ ವಿನೋದ್ ಎಂಬಾತನ ಮಾನಸಿಕ ಆರೋಗ್ಯ ಸ್ಥಿರತೆ ಕುರಿತು ಪರೀಕ್ಷೆ ನಡೆಸಿ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯಪಾಲರು ಮಾಜಿ ಪೊಲೀಸ್ ಮಹಾನಿರ್ದೇಶಕ ಸಿ ಸೈಲೇಂದ್ರ ಬಾಬು ಅವರನ್ನು ತಮಿಳುನಾಡು ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕುಪಿತಗೊಂಡ ಈತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.