ಚೆನ್ನೈ: ನಮ್ಮ ಬೆಳೆಗಳಿಗೆ ನೀರಿಲ್ಲ ಎಂದು ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ನಿತ್ಯ ಖ್ಯಾತೆ ತೆಗೆಯುತ್ತಿದೆ. ಆದರೆ ಅಲ್ಲೀಗ ಭಾರಿ ವರ್ಷಧಾರೆಯಾಗುತ್ತಿದೆ. ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಮಧುರೈ, ಥೇಣಿ, ದಿಂಡಿಗಲ್, ತಿರುನಲ್ವೇಲಿ, ತೆಂಕಶಿ, ತಿರುಪ್ಪ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲದೆ ನೀಲಗಿರಿ ಜಿಲ್ಲೆಯ ನಾಲ್ಕು ತಾಲೂಕುಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನವೆಂಬರ್ 8ರಂದು ಸಂಜೆ 5.30ಕ್ಕೆ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಈ ಮಾರುತಗಳು ಪಶ್ಚಿಮಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಿರಂತರ ಮಳೆಯಿಂದಾಗಿ ನೀಲಗಿರಿ ಮೌಂಟೇನ್ ರೈಲ್ವೆ ಮಾರ್ಗದಲ್ಲಿ ಸುಮಾರು ಐದು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ್ದು, ಪರ್ವತ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.