ಚೆನ್ನೈ/ತಿರುವನಂತಪುರ: ಈ ಬಾರಿ ಮಳೆಯಿಲ್ಲದೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಬರದಿಂದ ತತ್ತರಿಸಿವೆ. ಈ ನಡುವೆ ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ಬುಧವಾರ ಮತ್ತು ಗುರುವಾರ ಧಾರಾಕಾರ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಎರಡು ರಾಜ್ಯಗಳಿಗೆ ಎಲ್ಲೋ ಅಲರ್ಟ್ ಘೋಷಿಸಿದೆ.
ಕೇರಳ ಮತ್ತು ಮಾಹೆಯ ವಿವಿಧ ಭಾಗಗಳಲ್ಲಿ ಗುರುವಾರದವರೆಗೆ ಬಿರುಸಿನ ಮಳೆಯಾಗಲಿದೆ. ಹೀಗಾಗಿ, ಕಟ್ಟೆಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ತೀರ್ಮಾನಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ರಾಜಧಾನಿ ಚೆನ್ನೈ ಸಹಿತ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಚೆನ್ನೈಯ ಮೂಲಂಬಾಕಂ ಎಂಬಲ್ಲಿ ಸಬ್ವೇಗೆ ಪ್ರವಾಹದ ನೀರು ನುಗ್ಗಿ ಬಸ್ ಆಂಶಿಕವಾಗಿ ಮುಳುಗಿತ್ತು. ಕೂಡಲೇ ಚೆನ್ನೈ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ನೀರಿನಿಂದ ಹೊರಕ್ಕೆಳೆದಿದ್ದಾರೆ.