ಚೆನ್ನೈ: ತಮಿಳುನಾಡಿನ ಮಧುರೈ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಗುರುವಾರ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧುರೈ ಸಮೀಪದ ಉಸಲಂಬಟ್ಟಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಮಧುರೈ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಸ್ಫೋಟವು ಎಷ್ಟು ತೀವ್ರವಾಗಿತ್ತೆಂದರೆ, ಸತ್ತವರ ದೇಹದ ಭಾಗಗಳು ಕಾರ್ಖಾನೆಯ ಆವರಣದಲ್ಲಿ ಚದುರಿಹೋಗಿರುವುದು ಕಂಡುಬಂದಿದೆ.
ಮೃತರನ್ನು ಅಮವಾಸಿ, ಗೋಪಿ, ವಲ್ಲರಸು, ವಿಕಿ ಮತ್ತು ಪ್ರೇಮಾ ಎಂದು ಗುರುತಿಸಲಾಗಿದೆ. ಈ ಘಟಕವು ವಾಲಿಯಪ್ಪನ್ ಅವರ ಮಾಲೀಕತ್ವದಲ್ಲಿತ್ತು.
ಗಾಯಗೊಂಡವರನ್ನು ಉಸಲಂಬಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.