ನವದೆಹಲಿ: ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದಿಲ್ಲ ಎಂದು ಸಿಎಂ ಎಂಕೆ ಸ್ಟ್ಯಾಲಿನ್ ಹೇಳಿದ್ದಾರೆ. ಸಿಎಎಯಿಂದ ಸಮಾಜದಲ್ಲಿ ಒಡಕು ಉಂಟಾಗುತ್ತದೆಯಷ್ಟೇ ಆದ್ದರಿಂದ ರಾಜ್ಯದಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಒಡೆದು ಆಳುವ ಅಜೆಂಡಾ ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜವನ್ನು ಒಡೆಯುವುದಕ್ಕಾಗಿ ಸಿಎಎಯನ್ನು ಅಸ್ತ್ರವಾಗಿಸಿಕೊಂಡಿದೆ ಮುಸ್ಲಿಮರು ಹಾಗೂ ಶ್ರೀಲಂಕಾ ತಮಿಳಿರ ಕೈಬಿಡುವ ಮೂಲಕ ಬಿಜೆಪಿ ಸಮಾಜದಲ್ಲಿ ವಿಭಜನೆಯ ಬೀಜ ಬಿತ್ತಿದೆ ಎಂದು ಸ್ಟ್ಯಾಲಿನ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
“ಡಿಎಂಕೆಯಂತಹ ಪ್ರಜಾಸತ್ತಾತ್ಮಕ ಶಕ್ತಿಗಳ ತೀವ್ರ ವಿರೋಧದ ನಡುವೆಯೂ, ಬಿಜೆಪಿಯ ಮಿತ್ರ ಪಕ್ಷ ಎಡಿಎಂಕೆ ಬೆಂಬಲದೊಂದಿಗೆ ಸಿಎಎ ಅಂಗೀಕರಿಸಲಾಯಿತು. ಜನರ ವಿರೋಧಕ್ಕೆ ಹೆದರಿ ಬಿಜೆಪಿ ಈ ಕಾಯ್ದೆಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಿತ್ತು. 2021 ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ನಾವು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದೇವೆ. ನಮ್ಮ ರಾಷ್ಟ್ರದ ಏಕತೆಯನ್ನು ಕಾಪಾಡಲು, ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತತೆಯ ಆದರ್ಶವನ್ನು ರಕ್ಷಿಸಲು CAA ಅನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸುತ್ತದೆ” ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಹೇಳಿದರು.