ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬುಧವಾರ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿಯಾದರು. ಡಿಎಂಕೆ ನಾಯಕರು 5600 ಕೋಟಿ ರೂ. ಗಳ ಬೃಹತ್ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಪ್ರಕರಣದ ತನಿಖೆ ಸಂಬಂಧ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಚಿವರು, ಶಾಸಕರು, ಸಂಸದರ ಬೇನಾಮಿ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆ ಡಿಎಂಕೆ ಫೈಲ್ಸ್ ಪಾರ್ಟ್ 2 ನ್ನು ರಾಜ್ಯ ಪಾಲರಿಗೆ ಸಲ್ಲಿಸಿದರು. ಬಿಜೆಪಿ ಮುಖಂಡ ನಾಗರಾಜನ್, ಪಾಲ್ ಕನಕರಾಜ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು. ಡಿಎಂಕೆ ಫೈಲ್ಸ್ ಪಾರ್ಟ್ 1ನ್ನು ಏಪ್ರಿಲ್ 14 ರಂದು ಬಿಜೆಪಿ ರಾಜ್ಯ ಸಮಿತಿ ಕಚೇರಿ ಕಮಲಾಲಯದಲ್ಲಿ ಬಿಡುಗಡೆ ಮಾಡಲಾಗಿತ್ತು.
ಚೆನ್ನೈ ಮೆಟ್ರೋ ರೈಲು ಯೋಜನೆಯ ಮೊದಲ ಹಂತಕ್ಕೆ ಅನುಮೋದನೆ ನೀಡುವ ಸಲುವಾಗಿ ಆಗ ಉಪಮುಖ್ಯಮಂತ್ರಿಯಾಗಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಇಂಡೋ-ಯುರೋಪಿಯನ್ ಕಂಪನಿಯಿಂದ 200 ಕೋಟಿ ರೂಪಾಯಿ ಹಣವನ್ನು ಸ್ವೀಕರಿಸಿದ್ದಾರೆ ಎಂದು ಅಣ್ಣಾಮಲೈ ಡಿಎಂಕೆ ಫೈಲ್ಸ್ ಪಾರ್ಟ್ 1ರಲ್ಲಿ ಆರೋಪಿಸಿದ್ದರು.