ಚೆನ್ನೈ: ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತಮಿಳುನಾಡಿನ ಪ್ರಮುಖ ಪ್ರತಿಪಕ್ಷ, ಬಿಜೆಪಿ ಮಿತ್ರ ಪಕ್ಷವೂ ಆಗಿರುವ ಎಐಎಡಿಎಂಕೆ ಸ್ವಾಗತಿಸಿದೆ. ರಾಜ್ಯದಲ್ಲಿಯೂ ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ ಮಾಡಬೇಕು ಎಂದು ತಮಿಳುನಾಡು ಸರ್ಕಾರವನ್ನು ಆಗ್ರಹಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿ ಎಂದು ಡಿಎಂಕೆ ಸರ್ಕಾರವನ್ನು ಎಐಎಡಿಎಂಕೆ ಸಂಚಾಲಕ ಒ. ಪನ್ನೀರ್ ಸೆಲ್ವಂ ಒತ್ತಾಯಿಸಿದ್ದಾರೆ.
ಇಂಧನ ದರವನ್ನು ಕಡಿಮೆ ಮಾಡುವುದಾಗಿ 2021ರ ವಿಧಾನಸಭೆ ಚುನಾವಣೆಗೂ ಮುನ್ನ ಡಿಎಂಕೆ ಭರವಸೆ ನೀಡಿತ್ತು. ಇದೀಗ ಜನರಿಗೆ ನೆರವಾಗುವುದಕ್ಕಾಗಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ತಕ್ಷಣವೇ ದರ ಇಳಿಕೆ ಮಾಡಲಿ ಎಂದು ಪನ್ನೀರ್ ಸೆಲ್ವಂ ಆಗ್ರಹಿಸಿದ್ದಾರೆ.
ತರಕಾರಿಗಳ ದರ ಗಗನಮುಖಿಯಾಗಿರುವ ಬಗ್ಗೆಯೂ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರವು ಭಾಗಶಃ ಕಡಿಮೆ ಮಾಡಿದೆ ಎಂದು ರಾಜ್ಯಗಳು ಸಹ ಕಡಿಮೆ ಮಾಡಬೇಕೆಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಭಾನುವಾರ ಹೇಳಿದ್ದರು.
ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಶನಿವಾರ ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿತ್ತು.