ತಮಿಳುನಾಡು: ಬಿಜೆಪಿಯ ಎಸ್ಸಿ/ಎಸ್ಟಿ ಮುಖಂಡ ಬಾಲಚಂದರ್ (30) ನನ್ನು ಮೂವರು ದುಷ್ಕರ್ಮಿಗಳು ಮಂಗಳವಾರ ತಮಿಳುನಾಡಿನ ಚಿಂತಾದ್ರಿಪೇಟೆಯಲ್ಲಿ ಕೊಂದಿದ್ದಾರೆ.
ಬಾಲಚಂದರ್ ಅವರು ಬಿಜೆಪಿಯ ಎಸ್ಸಿ/ಎಸ್ಟಿ ಸೆಂಟ್ರಲ್ ಚೆನ್ನೈ ಮುಖ್ಯಸ್ಥರಾಗಿದ್ದರು. ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದರಿಂದ ಭದ್ರತೆಗಾಗಿ ಅವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಒ) ಒದಗಿಸಲಾಗಿತ್ತು.
ಬಾಲಚಂದರ್ ಸಾಮಿನಾಯಕನ್ ರಸ್ತೆಯಲ್ಲಿ ನಿಂತು ಬೇರೆಯವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಅವರ ಗನ್ಮ್ಯಾನ್ ಚಹಾ ಕುಡಿಯಲು ಹೋಗಿದ್ದರು. ಅದೇ ಸಮಯದಲ್ಲಿ, ಮೂವರು ವ್ಯಕ್ತಿಗಳು ಅವನನ್ನು ಸುತ್ತುವರೆದು ಬರ್ಬರವಾಗಿ ಕೊಂದಿದ್ದಾರೆ.
ಬಾಲಚಂದರ್ ಅವರ ಪಿಎಸ್ಒ ಆಗಿದ್ದ ಬಾಲಕೃಷ್ಣನ್ ಹಿಂತಿರುಗುವ ಮುನ್ನವೇ ಗ್ಯಾಂಗ್ ದ್ವಿಚಕ್ರ ವಾಹನಗಳನ್ನು ಹತ್ತಿ ಸ್ಥಳದಿಂದ ಪರಾರಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜಿವಾಲ್, ಹಳೆಯ ವೈಷಮ್ಯದಿಂದ ಬಾಲಚಂದರ್ ಕೊಲೆಯಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೊಲೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ.