ಚೆನ್ನೈ: ಮಠಾಧೀಶರನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಶೈವ ಮಠದ ಸಂಪ್ರದಾಯಕ್ಕೆ ಸ್ಥಳೀಯಾಡಳಿತ ಹೇರಿದ್ದ ನಿರ್ಬಂಧವನ್ನು ಕೊನೆಗೂ ತಮಿಳುನಾಡು ಸರಕಾರ ವಾಪಸ್ ಪಡೆದಿದೆ.
ಭಾರೀ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.ಪಲ್ಲಕ್ಕಿಯನ್ನು ಹೊತ್ತು ಸಾಗುವಂತಿಲ್ಲ ಎಂಬ ಆದೇಶವು ವಿವಾದ ಸೃಷ್ಟಿಸಿದ ಬೆನ್ನಲ್ಲೇ 4 ಶೈವ ಮಠಗಳ ಮಠಾಧೀಶರು ಸಿಎಂ ಎಂ.ಕೆ. ಸ್ಟಾಲಿನ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಅವರ ಮನವಿಗೆ ಸ್ಪಂದಿಸಿದ ಸ್ಟಾಲಿನ್, “ಮೇ 22ರಂದು ನಡೆಯಲಿರುವ ಪಟ್ಟಿಣ ಪ್ರವೇಶಂ ಸಂಪ್ರದಾಯವು ಎಂದಿನಂತೆ ಮುಂದುವರಿಸಬಹುದು’ ಎಂದು ಭರವಸೆ ನೀಡಿದ್ದರು.
ಅದರ ಬೆನ್ನಲ್ಲೇ ಜಿಲ್ಲಾಡಳಿತವೂ ಹೊಸ ಆದೇಶ ಹೊರಡಿಸಿ, ನಿರ್ಬಂಧ ವಾಪಸ್ ಪಡೆದಿರುವುದಾಗಿ ಘೋಷಿಸಿದೆ.
ಎ.27ರಂದು ಪಲ್ಲಕ್ಕಿ ಉತ್ಸವಕ್ಕೆ ನಿರ್ಬಂಧ ಸುದ್ದಿ ಹೊರಬೀಳುತ್ತಿದ್ದಂತೆ ಎಐಎಡಿಎಂಕೆ, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ನಿರ್ಬಂಧ ವಾಪಸ್ ಪಡೆಯದಿದ್ದರೆ ನಾನೇ ಪಲ್ಲಕ್ಕಿ ಹೊರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಘೋಷಿಸಿದ್ದರು