ಚೆನ್ನೈ: ಭಾರತದ ಪೂರ್ವ ಕರಾವಳಿ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಸಾನಿ ಚಂಡಮಾರುತದಿಂದ ಭಾರಿ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿಯತ್ತ ಧಾವಿಸಿ ಬಂದ ಚಂಡಮಾರುತ ನಿಧಾನವಾಗಿ ವೇಗ ಕಳೆದುಕೊಂಡಿದೆ
ತೀರ ಪ್ರದೇಶದಲ್ಲಿ ಬಿರುಗಾಳಿ ಬೀಸದಿದ್ದರೂ ವ್ಯಾಪಕವಾಗಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದಿಂದ ಹಾನಿಯಾಗುವ ಸಾಧ್ಯತೆಯಿರುವ ನಾಲ್ಕು ಕರಾವಳಿ ಜಿಲ್ಲೆಗಳಿಂದ ಜನರನ್ನು ಸ್ಥಳಾಂತರಿಸಲು ಒಡಿಶಾ ಸರ್ಕಾರ ಮುಂದಾಗಿದೆ. ರಾಜ್ಯದ ಯಾವುದೇ ಬಂದರು ಸಮೀಪಕ್ಕೆ ಹಡಗುಗಳು ಬರಬಾರದು ಎಂದು ಸರ್ಕಾರ ಸೂಚನೆ ನೀಡಿದೆ.
ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯೂ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಚಂಡಮಾರುತ ಪ್ರಭಾವದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೈದರಾಬಾದ್ನ ಹವಾಮಾನ ಮುನ್ಸೂಚನಾ ಕೇಂದ್ರ ಎಚ್ಚರಿಸಿದೆ.
ಈ ಮೊದಲು ಚಂಡಮಾರುತವು ಒಡಿಶಾ ಅಥವಾ ಆಂಧ್ರ ಪ್ರದೇಶದ ಕಡಲ ತೀರದಲ್ಲಿ ನೆಲಕ್ಕೆ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಂಗಳವಾರ ನಸುಕಿನ ನಂತರ ಚಂಡಮಾರುತವು ಪೂರ್ವ ತೀರಕ್ಕೆ ಸಮಾನಾಂತರವಾಗಿ ಸಂಚರಿಸಿ ಭಾರೀ ಮಳೆಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದರು. ಈ ನಡುವೆ ಚೆನ್ನೈಗೆ ಬರುತ್ತಿದ್ದ 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್, ವಿಶಾಖಪಟ್ಟಣ, ಜೈಪುರ ಮತ್ತು ಮುಂಬೈ ನಗರಗಳಿಂದ ಈ ವಿಮಾನಗಳು ಚೆನ್ನೈಗೆ ಬರಬೇಕಿತ್ತು. ವಿಮಾನಗಳು ರದ್ದುಪಡಿಸಿರುವ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.