ಪಟನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಸರ್ಕಾರವು ಏಕಾಏಕಿ ರಾಜ್ಯದ ಸರ್ಕಾರಿ ರಜೆಗಳಲ್ಲಿ ಆಶ್ಚರ್ಯಕರ ಬದಲಾವಣೆಗಳನ್ನು ತಂದಿದೆ. ರಾಜ್ಯದಲ್ಲಿ ಕೃಷ್ಣ ಜನ್ಮಾಷ್ಠಮಿ, ರಕ್ಷಾಬಂಧನ, ಶ್ರೀರಾಮನವಮಿ & ಶಿವರಾತ್ರಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳಿಗೆ ನೀಡಲಾಗಿದ್ದ ರಜೆಯನ್ನು ರದ್ದುಗೊಳಿಸಿದೆ. ಗಾಂಧಿ-ಶಾಸ್ತ್ರಿ ಜಯಂತಿ ರಜೆಯನ್ನೂ ರದ್ದು ಮಾಡಿದೆ. ಆದರೆ ಈದ್ ಮತ್ತು ಬಕ್ರೀದ್ ಹಬ್ಬಗಳ ಆಚರಣೆಗೆ ಸತತ ಮೂರು ದಿನಗಳ ಕಾಲ ಹಾಗೂ ಮೊಹರಂ ಹಬ್ಬಕ್ಕೆ 2 ದಿನಗಳ ರಜೆ ನೀಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ನಿತೀಶ್ ಸರ್ಕಾರ ಹಿಂದೂ ವಿರೋಧಿ ಎಂದು ಬಿಜೆಪಿ ತೀವ್ರ ಕಿಡಿಕಾರಿದೆ.
ಸೋಮವಾರ ಸರ್ಕಾರ ಬಿಡುಗಡೆ ಮಾಡಿದ ರಾಜ್ಯದ ರಜಾ ದಿನಗಳ ಕ್ಯಾಲೆಂಡರ್ನಲ್ಲಿ ಸರ್ಕಾರದ ಹೊಸ ಬದಲಾವಣೆ ಕಂಡು ಬಂದಿದೆ. ಅ.2ರ ಗಾಂಧಿ, ಶಾಸ್ತ್ರಿ ಜಯಂತಿ ರಜೆ ರದ್ದು ಮಾಡಲಾಗಿದೆ. ಆಯಾ ಮಹಾನ್ ಪುರುಷರ ಮೌಲ್ಯಗಳು ಮತ್ತು ವ್ಯಕ್ತಿತ್ವದ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನು ಮೇ 1 ರ ಕಾರ್ಮಿಕರ ದಿನಾಚರಣೆ, ಅ.2ರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ, ರಾಮನವಮಿ , ಶಿವರಾತ್ರಿ, ಸ್ಥಳೀಯ ಪ್ರಸಿದ್ಧ ಹಬ್ಬಗಳಾದ ತೇಜ್, ವಸಂತ್ ಪಂಚಮಿ ರಜೆಗಳನ್ನು ರದ್ದು ಮಾಡಲಾಗಿದೆ.
ಇದಲ್ಲದೆ ಹೊಸ ಕ್ಯಾಲೆಂಡರ್ ಪ್ರಕಾರ ಶಿಕ್ಷಕರ ಬೇಸಿಗೆ ರಜೆಯನ್ನು ಸಹ ಕಡಿತಗೊಳಿಸಲಾಗಿದೆ. ಈ ಪ್ರಕಾರ ಶಿಕ್ಷಕರಿಗೆ ನೀಡಲಾಗಿದ್ದ 60 ದಿನಗಳ ರಜೆಯಲ್ಲಿ 38 ದಿನ ಶಾಲೆಗೆ ಬರಬೇಕಿದ್ದು, ವರ್ಷದ 22 ದಿನ ಮಾತ್ರ ರಜೆ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ನೀಡಲಾಗುವ ಬೇಸಿಗೆ ರಜೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರು, ವೋಟ್ ಬ್ಯಾಂಕ್ಗಾಗಿ ಸನಾತನ ಸಂಸ್ಥೆಯನ್ನು ದ್ವೇಷಿಸುವ ಸರಕಾರಕ್ಕೆ ನಾಚಿಕೆಯಾಗಬೇಕು, ಹಿಂದೂ ವಿರೋಧಿ ಮುಖ ಮತ್ತೆ ಮುನ್ನೆಲೆಗೆ ಬಂದಿದೆ ಎಂದಿದ್ದಾರೆ.