ಅಯೋಧ್ಯೆ: ನೇಪಾಳದಿಂದ ಅಯೋಧ್ಯೆಗೆ ಎರಡು ಶಿಲೆಗಳನ್ನು ತರಲಾಗಿದೆ. ಆದರೆ ರಾಮ ಲಲ್ಲಾನ ವಿಗ್ರಹ ತಯಾರಿಕೆಯಲ್ಲಿ ನೇಪಾಳದ ಶಿಲೆಗಳನ್ನು ಬಳಸುವುದಿಲ್ಲ ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿದೆ. ನೇಪಾಳದಿಂದ ತಂದ ಕಲ್ಲುಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಮಲಲ್ಲಾ ವಿಗ್ರಹ ತಯಾರಿಕೆಯಲ್ಲಿ ಬಳಸುವುದಿಲ್ಲ. ಆದರೆ ಈ ಬಂಡೆಗಳನ್ನು ರಾಮಮಂದಿರ ಸಂಕೀರ್ಣದಲ್ಲಿಯೇ ಉಳಿಸಿಕೊಳ್ಳಲಾಗುವುದು. ಅವು ದೇವಶಿಲೆಗಳಾಗಿದ್ದು, ಅದಕ್ಕೆ ಸಂಪೂರ್ಣ ಗೌರವ ನೀಡಲಾಗುವುದು ಎಂದು ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.
ಈ ಮಧ್ಯೆ ಹೆಸರಾಂತ ಶಿಲ್ಪಿಗಳು ಕರ್ನಾಟಕ ಮತ್ತು ರಾಜಸ್ಥಾನದಿಂದ ತಂದ ಬಂಡೆಗಳಿಂದ ಶ್ರೀರಾಮನ ಮೂರು ವಿಗ್ರಹಗಳನ್ನು ಕೆತ್ತುತ್ತಿದ್ದಾರೆ. ಅವುಗಳಲ್ಲಿ ಉತ್ತಮವಾದವುಗಳನ್ನು ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಟ್ರಸ್ಟ್ ತಳಿಸಿದೆ. ರಾಮ್ ಲಲ್ಲಾ ವಿಗ್ರಹಕ್ಕೆ ಕರ್ನಾಟಕ ಮತ್ತು ರಾಜಸ್ಥಾನದ ಕಲ್ಲುಗಳನ್ನು ಬಳಸಲು ಟ್ರಸ್ಟ್ ನಿರ್ಧರಿಸಿದೆ ಎಂದು ಸದಸ್ಯರು ಹೇಳಿದ್ದಾರೆ.
ಕರ್ನಾಟಕದ ಗಣೇಶ್ ನೆಲ್ಲಿಕಾರು ಬಂಡೆಗಳಿಂದ (ಕಪ್ಪು ಕಲ್ಲುಗಳು) ವಿಗ್ರಹವನ್ನು ತಯಾರಿಸುತ್ತಿದ್ದಾರೆ, ಇದನ್ನು “ಶ್ಯಾಮ ಶಿಲಾ” ಅಥವಾ “ಕೃಷ್ಣ ಶಿಲಾ” ಎಂದೂ ಕರೆಯುತ್ತಾರೆ. ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರು ಬಿಳಿ ಮಕ್ರಾನಾ ಮಾರ್ಬಲ್ ಕಲ್ಲುಗಳಿಂದ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕರ್ನಾಟಕದಿಂದ ಬಂದಿರುವ ಮತ್ತೊಂದು ಬಂಡೆಯಿಂದ ವಿಗ್ರಹ ಕೆತ್ತಲಿದ್ದಾರೆ. ನೇಪಾಳದ ಗಂಡಕಿ ನದಿಯಿಂದ ತಂದ ಎರಡು ದೇವಶಿಲೆಗಳು (ಪ್ರಾಚೀನ ಬಂಡೆಗಳು) ಈ ವರ್ಷ ಫೆಬ್ರವರಿ 2 ರಂದು ಅಯೋಧ್ಯೆಯನ್ನು ತಲುಪಿದ್ದವು.