ಚೆನ್ನೈ: ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ.
ರಾಜ್ಯಪಾಲ ಹುದ್ದೆಯನ್ನು ಹೊಂದಿದ್ದ ತಮಿಳಿಸೈ ಸೌಂದರರಾಜನ್ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಕುರಿತು ಎಡಪಕ್ಷಗಳು ಹಾಗೂ ಡಿಎಂಕೆ ಪಕ್ಷದ ಟೀಕೆಯನ್ನು ಉಲ್ಲೇಖಿಸಿದ ಅಣ್ಣಾಮಲೈ, “ಉನ್ನತ ಮಟ್ಟದ ಹುದ್ದೆಗಳನ್ನು ತೊರೆದು, ಮತ್ತೆ ಸಾಮಾನ್ಯ ವ್ಯಕ್ತಿಗಳಂತೆ ಸಾರ್ವಜನಿಕರಿಗಾಗಿ ಕೆಲಸ ಮಾಡುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ” ಎಂದರು. ಬಿಜೆಪಿಯನ್ನು ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳ ನಾಯಕರು ಉನ್ನತಾಧಿಕಾರಗಳನ್ನು ತೊರೆಯುವುದಿಲ್ಲ. ಅವರಿಗೆ ರಾಜಕೀಯವೆಂದರೆ ಉನ್ನತ ಅಧಿಕಾರಗಳನ್ನು ಪಡೆಯುವ ಸಾಧನ ಮಾತ್ರ ಎಂದು ಅವರು ಹೇಳಿದರು.
ಆಕೆ ರಾಜ್ಯಪಾಲೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಅಂತಹ ಹುದ್ದೆಯನ್ನು ತೊರೆದು ಮತ್ತೆ ರಾಜಕೀಯಕ್ಕೆ ಸೇರ್ಪಡೆಯಾಗುತ್ತಿರುವುದು ಅವರಿಗೆ ಜನರ ಬಗೆಗಿರುವ ಪ್ರೀತಿಯನ್ನು ತೋರಿಸುತ್ತದೆ ಎಂದರು. ಅವರು ಮತ್ತೆ ಬಿಜೆಪಿಯನ್ನು ಸೇರ್ಪಡೆಯಾಗಿರುವುದು, ಅವರಿಗೆ ಪಕ್ಷದ ಬಗೆಗಿರುವ ಬದ್ಧತೆಯನ್ನು ತೋರಿಸುತ್ತಿದೆ. ಸತತ ಮೂರನೆಯ ಬಾರಿಗೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯವರ ಕೈ ಬಲಪಡಿಸುವಲ್ಲಿ ಅವರ ದೃಢ ನಿಶ್ಚಯದ ಕೆಲಸವು ಕೊಡುಗೆ ನೀಡುವಂತಾಗಲಿ ಎಂದು ಅಣ್ಣಾಮಲೈ ಹೇಳಿದರು.
ಬಿಜೆಪಿಗೆ ರಾಜಿನಾಮೆ ನೀಡಿದ ನಂತರ, 2019ರಲ್ಲಿ ತಮಿಳಿಸೈ ಸೌಂದರ್ ರಾಜನ್ ತೆಲಂಗಾಣ ರಾಜ್ಯಪಾಲೆಯಾಗಿ ನೇಮಕವಾಗಿದ್ದರು. 2021ರಲ್ಲಿ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು. 62 ವರ್ಷ ವಯಸ್ಸಿನ ತಮಿಳಿಸೈ ಸೌಂದರರಾಜನ್ ಸ್ತ್ರೀರೋಗ ತಜ್ಞೆಯಾಗಿದ್ದು, ಅವರು ಸುಮಾರು ಎರಡು ದಶಕಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.