ಜೈಪುರ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸ್ವಲ್ಪ ಸಮಯದ ನಂತರ ತನ್ನಿಂದ ತಾನೆ ಭಾರತದೊಂದಿಗೆ ವಿಲೀನಗೊಳ್ಳುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ, ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಸೋಮವಾರ ಹೇಳಿದ್ದಾರೆ.
ರಾಜಸ್ತಾನದ ದೌಸಾದಲ್ಲಿ ಬಿಜೆಪಿಯ ಪರಿವರ್ತನ್ ಸಂಕಲ್ಪ ಯಾತ್ರೆ ವೇಳೆ ಭಾರತಕ್ಕೆ ರಸ್ತೆ ಸಂಪರ್ಕ ಒದಗಿಸುವಂತೆ ಮನವಿ ಮಾಡಿದ ಪಿಒಕೆಯ ಶಿಯಾ ಮುಸ್ಲಿಮರ ಬೇಡಿಕೆ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು. G20 ಯಶಸ್ಸಿನ ಕುರಿತು ಮಾತನಾಡಿದ ಸಿಂಗ್, ಇಂತಹ ಸಂಘಟಿತ ಕಾರ್ಯಕ್ರಮ ಹಿಂದೆಂದೂ ನಡೆದಿರಲಿಲ್ಲ. ಇಂತಹ ಯಶಸ್ವಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಇತರ ದೇಶಗಳೂ ಭಾರತವನ್ನು ಶ್ಲಾಘಿಸಿವೆ ಎಂದರು. ಸಮ್ಮೇಳನದಲ್ಲಿ ಬಿಡುಗಡೆಯಾದ ಸಾಮೂಹಿಕ ಪ್ರಣಾಳಿಕೆಯಲ್ಲಿ ಭಾರತವು ದೊಡ್ಡ ವಿಜಯವನ್ನು ಸಾಧಿಸಿದೆ. ಉಕ್ರೇನ್ ಸೇರಿದಂತೆ ಹಲವು ವಿಷಯಗಳಲ್ಲಿ ಜಗತ್ತು ವಿಭಜನೆಯಾಗಿತ್ತು, ಆದರೆ ಪ್ರಧಾನಿ ಮೋದಿಯವರ ಬುದ್ಧಿವಂತಿಕೆಯಿಂದ ನಾವೆಲ್ಲರೂ ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಆಕ್ಷೇಪಣೆಯಿಲ್ಲದ ಮಾರ್ಗವನ್ನು ಕಂಡುಕೊಂಡಿದ್ದೇವೆ ಎಂದರು.
ಜೈವಿಕ ಇಂಧನ ಒಕ್ಕೂಟ ರಚನೆ ಹಾಗೂ ಭಾರತದಿಂದ ಯುರೋಪ್ ವರೆಗಿನ ಕಾರಿಡಾರ್ ಭಾರತದ ಆರ್ಥಿಕ ಪ್ರಗತಿಗೆ ಜಿ 20 ನಾಂದಿಯಾಗಲಿದೆ ಎಂದರು. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಜಿ-20 ಜಂಟಿ ಘೋಷಣೆಯನ್ನು ಸ್ವಾಗತಿಸಿದ್ದಾರೆ” ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಿಯೇ ಚುನಾವಣೆ ನಡೆದರೂ ಬಿಜೆಪಿ ಮುಖ್ಯಮಂತ್ರಿಯನ್ನು ಘೋಷಣೆ ಮಾಡದೆ ಕೇವಲ ಪ್ರಧಾನಿ ವರ್ಚಸ್ಸಿನ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತದೆ ಎಂದರು.