ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ದಿನೇ ದಿನೇ ಕಾವೇರುತ್ತಿದ್ದು, ಬಿಜೆಪಿ ಹೈಕಮಾಂಡ್ ಫಲಿತಾಂಶ ಬಂದು ವಾರವಾದರೂ ಇನ್ನೂ ಹೆಸರನ್ನು ಅಂತಿಮಗೊಳಿಸಿಲ್ಲ. ಆದರೆ ಈಗ ಸಿಎಂ ರೇಸ್ನಲ್ಲಿದ್ದ ಬಾಬಾ ಬಾಲಕನಾಥ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವು ಸಾಧಿಸಿದ ನಂತರ ಬಾಬಾ ಬಾಲಕನಾಥ್ ಅವರು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ಇಲ್ಲಿ ಶಾಸಕರಾಗಿ ಗೆದ್ದ ಬಳಿಕ ಅವರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರಿಗೆ ಸಿಎಂ ಸ್ಥಾನ ನೀಡಬಹುದು ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ.
ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದರಾಗಿ ರಾಷ್ಟ್ರ ಸೇವೆ ಮಾಡುವ ಅವಕಾಶಕ್ಕಾಗಿ ಬಾಬಾ ಬಾಲಕನಾಥ್ ತಮ್ಮ ಹೇಳಿಕೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
“ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದ ಮತ್ತು ಶಾಸಕರಾಗುವ ಮೂಲಕ ರಾಷ್ಟ್ರ ಸೇವೆ ಮಾಡುವ ಅವಕಾಶವನ್ನು ಪಡೆದಿದ್ದೇನೆ.
ಚುನಾವಣಾ ಫಲಿತಾಂಶ ಬಂದ ನಂತರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನಿರ್ಲಕ್ಷಿಸಿ. ಸದ್ಯಕ್ಕೆ ನಾನು ಪ್ರಧಾನಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಮಾರ್ಗದರ್ಶನದಲ್ಲಿ ನಾನು ಹೆಚ್ಚಿನ ಅನುಭವವನ್ನು ಪಡೆಯಲು ಬಯಸುತ್ತೇನೆ “ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಬಾಲಕನಾಥ್ ಹೇಳಿದ್ದಾರೆ.
ಬಾಬಾ ಬಾಲಕನಾಥ್ ಪ್ರಸ್ತುತ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಅವರು ನಾಥ ಪಂಥದ 8 ನೇ ಮಹಂತ್ ಕೂಡ ಆಗಿದ್ದಾರೆ.