ಜೈಪುರ: ‘ನನ್ನ ನೇತೃತ್ವದ ಕೇಂದ್ರ ಸರ್ಕಾರವು ಎಂಟು ವರ್ಷದಲ್ಲಿ ಉತ್ತಮ ಆಡಳಿತ, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಬಿಜೆಪಿ ಮುಂದಿನ 25 ವರ್ಷಕ್ಕೆ ಗುರಿ ನಿಗದಿಪಡಿಸಲು, ಆ ನಿಟ್ಟಿನಲ್ಲಿ ಕೆಲಸ ಮಾಡಲು ಇದು ಸಕಾಲ’ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
‘ಪ್ರಸ್ತುತ, ವಿರೋಧಪಕ್ಷಗಳು ದೇಶದ ಗಮನವನ್ನು ಅಭಿವೃದ್ಧಿಯಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿವೆ. ಬಿಜೆಪಿಯ ಮುಖಂಡರು ಇಂತಹ ಹುನ್ನಾರಗಳಿಗೆ ಬಲಿಯಾಗದೇ ರಾಷ್ಟ್ರ ಹಿತದ ಮುಖ್ಯ ವಿಷಯಗಳಿಗೆ ಬದ್ಧರಾಗಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಬಿಜೆಪಿ ಅಭಿವೃದ್ಧಿಯನ್ನು ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ತಂದಿದೆ. ಆದರೆ, ಕೆಲ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ದೇಶದ ಭವಿಷ್ಯದ ಜೊತೆಗೆ ಆಟವಾಡುತ್ತಿವೆ ಎಂದು ಅವರು ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೇ ಟೀಕಿಸಿದರು.
ಕೇಂದ್ರ ಸರ್ಕಾರವು 8 ವರ್ಷದ ಆಡಳಿತ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರು ಇಲ್ಲಿ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ವರ್ಚುವಲ್ ರೂಪದಲ್ಲಿ ಮಾತನಾಡಿದರು.
‘ಪಕ್ಷದ ಮುಖಂಡರು ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಹೊರತುಪಡಿಸಿ, ಇತರೆ ಅಂಶಗಳಿಗೆ ಗಮನ ಕೊಡಬಾರದು’ ಎಂದರು. ಜ್ಞಾನವಾಪಿ ಮಸೀದಿಯಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ ಈ ಹೇಳಿಕೆ ಗಮನಾರ್ಹವಾಗಿದೆ.
ವಿರೋಧಪಕ್ಷಗಳು ಸ್ವಹಿತಾಸಕ್ತಿಗಾಗಿ ಸಮಾಜದ ಸಣ್ಣ ದೌರ್ಬಲ್ಯ, ಉದ್ವಿಗ್ನತೆಗಳನ್ನು ಬಳಸಿಕೊಂಡು ವಿಷ ಕಕ್ಕುತ್ತಿವೆ. ಕೆಲವೊಂದು ಬಾರಿ ಜಾತಿ, ಧರ್ಮದ ಆಧಾರದಲ್ಲಿಯೂ ಅವು ಜನರನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು.
‘ಏಕ್ ಭಾರತ್, ಶ್ರೇಷ್ಠ ಭಾರತ್’ ಕುರಿತು ಕನಸು ಸಾಕಾರಗೊಳಿಸಲು ಇಂಥ ಯತ್ನದ ವಿರುದ್ಧ ಜಾಗೃತರಾಗಿರುವಂತೆ ಜನರನ್ನು ಎಚ್ಚರಿಸುವುದು ಅಗತ್ಯ. ಜನಸಂಘದ ಕಾಲದಿಂದಲೂ ರಾಷ್ಟ್ರದ ಹಿತಾಸಕ್ತಿ, ದೇಶ ನಿರ್ಮಾಣವೇ ಪಕ್ಷದ ಕಾರ್ಯಕ್ರಮಗಳ ಕೇಂದ್ರವಾಗಿದೆ ಎಂದು ಹೇಳಿದರು.