ಜೈಪುರ್ : ರಾಜಸ್ಥಾನದ ದೇವಸ್ಥಾನವೊಂದರಲ್ಲಿ ನವವಿವಾಹಿತ ದಲಿತ ದಂಪತಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ. ಭಾರತದಲ್ಲಿ ಮೇಲು-ಕೀಳು, ಕೆಳಜಾತಿ-ಮೇಲ್ಜಾತಿ ಎನ್ನುವ ಅನಿಷ್ಠ ಪದ್ಧತಿ ಇಂದಿಗೂ ಜೀವಂತವಾಗಿದೆಯೇ ಎನ್ನುವ ಅನುಮಾನಗಳಿಗೆ ಪದೇ ಪದೆ ಇಂಥ ಘಟನೆಗಳು ಸಾಕ್ಷಿ ಆಗುತ್ತಿವೆ.
ಜಲೋರ್ನ ದೇವಸ್ಥಾನದಲ್ಲಿ ನವವಿವಾಹಿತ ದಲಿತ ದಂಪತಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಅರ್ಚಕರೊಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದಂಪತಿಯು ದೇವಸ್ಥಾನ ಪ್ರವೇಶಿಸುವುದಕ್ಕೆ ಹಾಗೂ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ನೀಡದ ಹಿನ್ನೆಲೆ ಅರ್ಚಕರು ಮತ್ತು ದಂಪತಿ ನಡುವೆ ವಾಗ್ವಾದ ನಡೆದಿತ್ತು. ಇದರ ಬೆನ್ನಲ್ಲೇ ನೊಂದ ಕುಟುಂಬವು ಅರ್ಚಕನ ವಿರುದ್ಧ ಪೊಲೀಸರಿಗೆ ದೂರು ನೀಡಿತ್ತು. ಪೂಜಾರಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನಾವು ಅರ್ಚಕನ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ ಎಂದು ಜಲೋರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲಾ ತಿಳಿಸಿದ್ದಾರೆ.