ಚಂಡಿಗಡ: ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಅವರು, ನವಜೋತ್ ಸಿಂಗ್ ಸಿಧು ಜನಪ್ರಿಯ ನಾಯಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ. ಈ ವಿಚಾರದ ಕುರಿತ ನಿರ್ಧಾರವನ್ನು ಕಾಂಗ್ರೆಸ್ನ ರಾಷ್ಟ್ರ ಘಟಕದ ಅಧ್ಯಕ್ಷರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
‘ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ನಿರ್ಧಾರವನ್ನು ನಿನ್ನೆಯಷ್ಟೆ(ಭಾನುವಾರ) ತೆಗೆದುಕೊಳ್ಳಲಾಗಿದೆ. ಇದು ಒಮ್ಮತದಿಂದ ಕೂಡಿದ ತೀರ್ಮಾನವಾಗಿದ್ದು, ಪೂರ್ವ ನಿಯೋಜಿತವಾಗಿರಲಿಲ್ಲ’ ಎಂದೂ ರಾವತ್ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ರಾಜೀನಾಮೆ ನೀಡಿದ್ದರು.