ಬೆಂಗಳೂರು: ದೂರದ ಉತ್ತರ ಪ್ರದೇಶದಿಂದ ಬಂದು ನಗರದಲ್ಲಿ ಸರಗಳ್ಳತನ ಮಾಡಿ ಪರಾರಿ ಆಗುತಿದ್ದ ಗ್ಯಾಂಗ್ ನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಕಳ್ಳರು ಫ್ಲೈಟ್ ನಲ್ಲಿ ಬಂದು ಕಳ್ಳತನ ಮಾಡಿ ಮರಳಿ ರೈಲಿನಲ್ಲಿ ಈ ಹೋಗಿ ಕಳ್ಳತನ ಮಾಡಿದ ಚಿನ್ನ ಮಾರಿ ಐಷಾರಾಮಿ ಜೀವನ ನಡೆಸುತಿದ್ದರೆಂದು ಪೋಲೀಸರು ತಿಳಿಸಿದ್ದಾರೆ.
ಬಂಧಿತ ಖದೀಮರನ್ನು ಅರ್ಜುನ್ ಕುಮಾರ್ ಮತ್ತು ರಾಥೋಡ್ ಎಂದು ಗುರುತಿಸಲಾಗಿದ್ದು ಇವರು . ಕೆಜಿಗಟ್ಟಲೆ ಚಿನ್ನಾಭರಣ ಕದ್ದು ಊರಲ್ಲಿ ಮಾರಾಟ ಮಾಡಿ ಮನೆಗೆ ವಾಷಿಂಗ್ ಮಷೀನ್, ಫ್ರಿಡ್ಜ್ ಸೇರಿ ಗೃಹ ಉಪಯೋಗಿ ವಸ್ತುಗಳನ್ನ ತಂದಿದ್ದರು. ಉಳಿದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಬೆಂಗಳೂರು ಗ್ರಾಮಾಂತರ ಪೊಲೀಸರು ಈ ಐನಾತಿಗಳನ್ನು ಹಿಡಿಯಲು ಹಗಲೂ ರಾತ್ರಿ ನಿದ್ದೆಗೆಟ್ಟಿದ್ದರು. ಬ್ಲಾಕ್ ಪಲ್ಸಾರ್ ಬೈಕಿನಲ್ಲಿ ಈ ಕಳ್ಳರು . ಬರೋಬ್ಬರಿ 19 ಕಡೆ ಸರಗಳ್ಳತನ ಮಾಡಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿದ್ದರು. ಈ ಕಳ್ಳರು ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್.ನವರಾಗಿದ್ದು ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಈ ಶಾಮ್ಲಿ ಗ್ಯಾಂಗ್ ಕಳ್ಳತನವನ್ನೇ ಕುಲ ಕಸುಬನ್ನಾಗಿ ಮಾಡಿಕೊಂಡಿದೆ.
ಕಳೆದ ಜೂನ್ 30ರಂದು ಮುಖ್ಯ ಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ಪೊಲೀಸರು ಬ್ಯುಸಿಯಾಗಿದ್ದರು. ಈ ಸಮಯವನ್ನೇ ಬಳಸಿಕೊಂಡು ಹೊರವಲಯದಲ್ಲಿ ಒಂದೇ ದಿನ 19 ಕಡೆ ಸರಗಳ್ಳತನ ಮಾಡಿದ್ದರು. ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು. ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಒಂದೇ ದಿನ ಕೆಜಿಗಟ್ಟಲೆ ಚಿನ್ನಾಭರಣ ಕಳ್ಳತನ ಮಾಡಿದ್ದರು. ಇದಕ್ಕೂ ಮೊದಲು ರಾಜಾಜಿನಗರ ಹಾಗೂ ಚಂದ್ರಾ ಲೇಔಟ್ ನಲ್ಲಿ ಕಳ್ಳತನ ಮಾಡಿದ್ದರು. ಒಮ್ಮೆ ಸರ ಕಳ್ಳತನ ಮಾಡಿಕೊಂಡು ಹೋದರೆ ಮತ್ತೆ ಮೂರು ವರ್ಷ ಈ ಕಡೆ ತಲೆ ಹಾಕುತ್ತಿರಲಿಲ್ಲ ಹಾಗಾಗಿ ಪೋಲೀಸರಿಗೆ ಈ ಗ್ಯಾಂಗ್ ಪತ್ತೆ ತ್ರಾಸದಾಯಕವಾಗಿತ್ತು. ಇವರು ಕಳ್ಳತನದ ಬಳಿಕ ಚಿನ್ನವನ್ನು ಫ್ಲೈಟ್ ನಲ್ಲಿ ಸಾಗಿಸುವುದು ಕಷ್ಟ ಎಂದು ರೈಲಿನಲ್ಲಿ ಹೋಗುತ್ತಿದ್ದರು.
ಅರ್ಜುನ್ ಕುಮಾರ್ ಈ ಗ್ಯಾಂಗ್ ನ ಮಾಸ್ಟರ್ ಮೈಂಡ್ ಆಗಿದ್ದು, ಗ್ಯಾಂಗ್ ನಲ್ಲಿ ಕೇವಲ ಇಬ್ಬರಿಂದಲೇ ಕೃತ್ಯ ನಡೀತಿತ್ತು. ಜೂನ್ ತಿಂಗಳಲ್ಲೇ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದ ಈ ಸರಗಳ್ಳರು, ಸರ್ಜಾಪುರದ ಬಳಿ ಬೈಕ್ ಕದ್ದು ಸ್ನೇಹಿತನೊಬ್ಬನ ರೂಮ್ ನಲ್ಲಿ ಠಿಕಾಣಿ ಹೂಡಿದ್ದರು. 220 ಪಲ್ಸರ್ ಬೈಕ್ ಕದ್ದು ನಗರದ ಹೊರವಲಯ ಪೂರ್ತಿ ರೌಂಡ್ಸ್ ಹಾಕಿದ್ದರು. ಇದೇ ಸಮಯದಲ್ಲಿ ಸ್ನೇಹಿತನ ಮೂಲಕ ಸಿಎಂ ಕಾರ್ಯಕ್ರಮ, ಪೊಲೀಸ್ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದಿದ್ದರು. ಜೂನ್ ಮೂವತ್ತರಂದೇ ಬೆಳಗ್ಗೆ ಎರಡು ಹೆಲ್ಮೆಟ್ ಗಳನ್ನು ಕದ್ದು ಕಾರ್ಯಾಚರಣೆ ನಡೆಸಿದ್ದರು.
ಮೊದಲೇ ಮ್ಯಾಪಿಂಗ್ ಮಾಡಿದ್ದ ಆರೋಪಿಗಳು, ಅದರಂತೆ ಕಾರ್ಯಾಚರಣೆಗೆ ಇಳಿದಿದ್ದರು. ಕೊನೆಗೆ ಸರಗಳ್ಳತನ ಮಾಡಿ ಸಂಜೆ ವೇಳೆಗೆ ಮತ್ತೆ ಸರ್ಜಾಪುರದ ರೂಮ್ ಗೆ ಎಂಟ್ರಿಯಾಗಿದ್ದರು. ಬಳಿಕ ಚಿನ್ನಾಭರಣ ಎತ್ತಿಕೊಂಡು ಬೈಕ್ ನ್ನು ಮಾರ್ಗಮಧ್ಯೆ ಬಿಟ್ಟು ಅಂದೇ ರಾತ್ರಿಯೇ ರೈಲಿನಲ್ಲಿ ಎಸ್ಕೇಪ್ ಆಗಿದ್ದರು. ಮೊದಲಿಗೆ ಆಶ್ರಯ ಕೊಟ್ಟವನನ್ನು ಪತ್ತೆಮಾಡಿ, ಬಳಿಕ ಪಂಜಾಬ್ ಗೆ ಕರೆದೊಯ್ದು, ವೀಡಿಯೋ ಕಾಲ್ ಮಾಡಿಸಿ, ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಕುಖ್ಯಾತ ಶಾಮ್ಲಿ ಗ್ಯಾಂಗ್ ನ ಅಂತರ್ರಾಜ್ಯ ಸರಗಳ್ಳರ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.