ದೆಹಲಿ: ಹೃದಯ, ಕಣ್ಣು, ಕಿಡ್ನಿ ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಕಸಿ ಮಾಡಿದ ಮತ್ತು ಮಾಡಿ ಯಶಸ್ವಿಯಾದ ಅನೇಕ ಕತೆಗಳು ಭಾರತದಲ್ಲಿವೆ. ಇದೀಗ ಕೈ ಕಸಿ ಮಾಡಿ ಯಶಸ್ವಿಯಾದ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಹೌದು. . ಚಿತ್ರಕಲಾಕಾರ ತನ್ನ ಜೀವನದಲ್ಲಿ ನಡೆದ ಅಪಘಾತವೊಂದರಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಅದೃಷ್ಟವೆಂಬಂತೆ ವೈದ್ಯರು ಆತನಿಗೆ ಎರಡು ಕೈಗಳನ್ನು ಕಸಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಆತನ ಜೀವನದಲ್ಲಿ ಹೊಸ ಮಂದಹಾಸ ಮೂಡುವಂತೆ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಕೈ ಕಳೆದುಕೊಂಡ ವ್ಯಕ್ತಿಗೆ ಕೈ ಕಸಿ ಮಾಡಿದ್ದಾರೆ. ಇದು ವೈದ್ಯ ಲೋಕವನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. 2020ರಲ್ಲಿ ಪೇಂಟರ್ ರೈಲು ಅಪಘಾತದಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ 12 ಗಂಟೆಗಳ ನಿರಂತರ ಶಸ್ತ್ರ ಚಿಕಿತ್ಸೆ ಮೂಲಕ ವ್ಯಕ್ತಿಗೆ ಎರಡು ಕೈಗಳನ್ನು ಕಸಿ ಮಾಡಲಾಗಿದೆ.
ದೆಹಲಿ ಪ್ರತಿಷ್ಠಿತ ಶಾಲೆಯ ಆಡಳಿತ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ ಮೀನಾ ಮೆಹ್ತಾ ತಮ್ಮ ನಿಧನದ ಬಳಿಕ ಎರಡು ಕೈಗಳನ್ನು ದಾನ ಮಾಡಿದ್ದಾರೆ. ಅದೇ ಕೈಗಳನ್ನು ಈ ವ್ಯಕ್ತಿಗೆ ಜೋಡಿಸಲಾಗಿದೆ. ಇವಿಷ್ಟು ಮಾತ್ರವಲ್ಲ, ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾವನ್ನು ಕೂಡ ದಾನ ಮಾಡಿದ್ದಾರೆ. ಒಟ್ಟಿನಲ್ಲಿ ಮೂರು ಜನರಿಗೆ ಮೀನಾ ಮೆಹ್ತಾ ಮರು ಜನ್ಮ ನೀಡಿದ್ದಾರೆ.