ಭುವನೇಶ್ವರ: ಬಾಲಸೋರ್ನಲ್ಲಿ ತ್ರಿವಳಿ ರೈಲು ದುರಂತ ಸಂಭವಿಸಿದ ಕೇವಲ ಮೂರು ದಿನಗಳ ಅಂತರದಲ್ಲಿ ಒಡಿಶಾದ ಬರ್ಗಢ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದರ ಸರಕು ರೈಲು ಹಳಿತಪ್ಪಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಸುಣ್ಣದಕಲ್ಲು ಸಾಗಿಸುತ್ತಿದ್ದ ಖಾಸಗಿ ಕಂಪನಿಯೊಂದರ ಗೂಡ್ಸ್ ರೈಲಿನ ಐದು ವ್ಯಾಗನ್ಗಳು ಬರ್ಗರ್ನ ಮೆಂಧಪಾಲಿ ಬಳಿ ಹಳಿತಪ್ಪಿವೆ. ಎಸಿಸಿ ಬರ್ಗಢ್ನ ಡುಂಗ್ರಿ ಸುಣ್ಣದ ಕಲ್ಲು ಗಣಿ ಮತ್ತು ಸಿಮೆಂಟ್ ಸ್ಥಾವರವನ್ನು ಸಂಪರ್ಕಿಸುವ ಖಾಸಗಿ ರೈಲು ಮಾರ್ಗದಲ್ಲಿ ಸೋಮವಾರ ಮುಂಜಾನೆ ಹಳಿ ತಪ್ಪಿದೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ. ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.
“ಇದು ಸಂಪೂರ್ಣವಾಗಿ ಖಾಸಗಿ ಸಿಮೆಂಟ್ ಕಂಪನಿಯ ರೈಲು, ನ್ಯಾರೋ ಗೇಜ್ ಸೈಡಿಂಗ್, ರೋಲಿಂಗ್ ಸ್ಟಾಕ್, ಎಂಜಿನ್, ವ್ಯಾಗನ್, ರೈಲು ಹಳಿ (ನ್ಯಾರೋ ಗೇಜ್) ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಂಪನಿಯೇ ನಿರ್ವಹಿಸುತ್ತಿದೆ, ಈ ವಿಷಯದಲ್ಲಿ ರೈಲ್ವೆಯ ಪಾತ್ರವಿಲ್ಲ. ಎಂದು ಪೂರ್ವ ಕರಾವಳಿ ರೈಲ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.