ಒಡಿಶಾ: ಒಡಿಶಾದ ಜಾಜ್ಪುರದಲ್ಲಿ ಹೋಳಿ ಆಡಿದ ನಂತರ ನದಿಗೆ ಸ್ನಾನ ಮಾಡಲು ತೆರಳಿದ ಆರು ಮಂದಿ ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಸಾವನ್ನಪ್ಪಿದ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಒಡಿಶಾದ ಜಾಜ್ಪುರದ ಖರಾಸ್ರೋಟಾ ನದಿಯಲ್ಲಿ ಶನಿವಾರ ಮುಳುಗಿ ಸಾವನ್ನಪ್ಪಿದ ಆರು ಬಾಲಕರಲ್ಲಿ ಮೂರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ಡಿಸಾಸ್ಟರ್ ರ್ಯಾಪಿಡ್ ಆಕ್ಷನ್ ಫೋರ್ಸ್ (ODRAF) ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇಂದು ಬೆಳಗ್ಗೆಯಿಂದಲೂ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಆರು ಮಂದಿ ಬಾಲಕರು ಶನಿವಾರ ಹೋಳಿ ಆಡಿದ ಬಳಿಕ ಸ್ನಾನಕ್ಕೆಂದು ನದಿಗೆ ತೆರಳಿದ್ದರು. ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ಅವರಲ್ಲಿ ಒಬ್ಬರು ನದಿಯಲ್ಲಿ ಮುಳುಗುತ್ತಿರುವುದನ್ನು ಅವರು ಗಮನಿಸಿದರು. ಹೀಗೆ ಒಬ್ಬೊಬ್ಬರಾಗಿ ಸ್ನೇಹಿತರನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ ಎನ್ನಲಾಗಿದೆ.