ನವದೆಹಲಿ: ಕೋವಿಡ್-19 ವ್ಯಾಕ್ಸಿನೇಷನ್ಗೂ ಮತ್ತು ದೇಶದಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಹೃದಯ ಸ್ತಂಭನ ಪ್ರಕರಣಗಳ ಕುರಿತು ಮಾಹಿತಿ ನೀಡುವಾಗ, ಮಾರಣಾಂತಿಕ ಕೋವಿಡ್-19 ರೋಗಕ್ಕೆ ಲಸಿಕೆಗಳನ್ನು ತೆಗೆದುಕೊಂಡ ನಂತರ ಜನರು ಹಠಾತ್ತನೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬ ಐಸಿಎಂಆರ್ ಅಧ್ಯಯನ ನಡೆಸಿತು. 18 ರಿಂದ 45 ವರ್ಷ ವಯಸ್ಸಿನ ಆರೋಗ್ಯವಂತ ವಯಸ್ಕರಲ್ಲಿ ಹಠಾತ್ ಸಾವಿನ ಬಗ್ಗೆ ವರದಿ ಪ್ರಕಟಿಸಿದೆ.
ಯುವಕರಲ್ಲಿ ಹಠಾತ್ ಹೃದಯಾಘಾತ ಸಂಭವಿಸುತ್ತಿದೆ. ಈ ಸಾವುಗಳಿಗೂ ಕೋವಿಡ್ ವ್ಯಾಕ್ಸಿನೇಷನ್ಗೂ ಯಾವುದೇ ಸಂಬಂಧ ಇಲ್ಲ. ಅದನ್ನು ಸಾಬೀತುಪಡಿಸಲು ಯಾವುದೇ ಪುರಾವೆ ನಮಗೆ ಕಂಡುಬಂದಿಲ್ಲ ಎಂದು ಸಂಶೋಧನಾ ತಂಡವು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದೆ.
ಇನ್ನು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿರುವ ಅಧ್ಯಯನದ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕೊರೊನಾದಿಂದ ಗಂಭೀರವಾಗಿ ತೊಂದರೆಗೀಡಾಗಿದ್ದ ವ್ಯಕ್ತಿಗಳು ಸೋಂಕು ಗುಣಪಟ್ಟ ಬಳಿಕವೂ 1 ರಿಂದ 2 ವರ್ಷಗಳವರೆಗೆ ಅತಿಯಾದ ವ್ಯಾಯಾಮ ಹಾಗೂ ತೀವ್ರತರದ ಕೆಲಸಗಳನ್ನು ಮಾಡಬಾರದು. ಇದರಿಂದ ದೂರ ಇದ್ದಷ್ಟು ಅವರು ಏಕಾಏಕಿ ಹೃದಯಸ್ತಂಭನದಂಥ ಸಮಸ್ಯೆಯಿಂದ ಪಾರಾಗಬಹುದು ಎಂದಿದ್ದರು.