ಇಂಫಾಲ: ಮಣಿಪುರದಲ್ಲಿ 13 ದಿನಗಳ ಕಾಲ ಶಾಂತಿಯ ವಾತಾವರಣವಿತ್ತು. ಇದೀಗ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ ಮೂವರು ಗ್ರಾಮ ರಕ್ಷಣಾ ಸ್ವಯಂಸೇವಕರು (ವಿಡಿಎಫ್) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಡಕಟ್ಟು ಪ್ರಾಬಲ್ಯದ ಥೋವೈ ಗ್ರಾಮದಲ್ಲಿ ಎರಡು ಗುಂಪುಗಳ ನಡುವಿನ ಗುಂಡಿನ ಚಕಮಕಿ ನಡೆದಿದೆ ಎಂದು ಉಖ್ರುಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಗ್ಸೆಮ್ ವಶುಮ್ ತಿಳಿಸಿದ್ದಾರೆ. ಮೃತರನ್ನು ಜಮ್ಖೋಗಿನ್ ಹಾಕಿಪ್ (26), ತಂಗ್ಖೋಕೈ ಹಾಕಿಪ್ (35) ಮತ್ತು ಹೊಲೆನ್ಸನ್ ಬೈಟ್ (24) ಎಂದು ಗುರುತಿಸಲಾಗಿದೆ. ಸಂಯೋಜಿತ ಭದ್ರತಾ ಪಡೆಗಳ ಬೃಹತ್ ತುಕಡಿಯು ಸ್ಥಳಕ್ಕೆ ಧಾವಿಸಿದ್ದು, ದುಷ್ಕರ್ಮಿಗಳನ್ನು ಹಿಡಿಯಲು ಕೂಂಬಿಂಗ್ ಪ್ರಾರಂಭಿಸಿದೆ. ಆಗಸ್ಟ್ 5 ರಂದು ಬಿಷ್ಣುಪುರ್ ಜಿಲ್ಲೆಯ ಕ್ವಕ್ತಾ ಲಂಖೈ ಗ್ರಾಮದಲ್ಲಿ ಒಬ್ಬ ವೃದ್ಧ ಮತ್ತು ಆತನ ಪುತ್ರನನ್ನು ಕೊಲೆ ಮಾಡಲಾಗಿತ್ತು.