ಅಯೋಧ್ಯೆ: ತರಕಾರಿ ವ್ಯಾಪಾರಿಯೊಬ್ಬ ಅಯೋಧ್ಯೆಯ ರಾಮಮಂದಿರಕ್ಕೆ ನೀಡಲು 9 ದೇಶಗಳ ಸಮಯವನ್ನು ಏಕಕಾಲದಲ್ಲಿ ಹೇಳುವ ವಿಶ್ವ ಗಡಿಯಾರವನ್ನು (Clock) ಸಿದ್ಧಪಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಲಕ್ನೋದ ನಿವಾಸಿ ಅನಿಲ್ ಕುಮಾರ್ ಸಾಹು ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದವರು.
ಇವರು ವೃತ್ತಿಪರ ತರಕಾರಿ ವ್ಯಾಪಾರಿಯಾಗಿದ್ದು, ಅವರು ರಾಮನ ಭಕ್ತರಾಗಿದ್ದಾರೆ. ರಾಮಮಂದಿರಕ್ಕಾಇ ಏನಾದರೂ ವಿಶೇಷ ಉಡುಗೊರೆಯನ್ನು ನೀಡಬೇಕು ಎಂದುಕೊಂಡು ಕಳೆದ 5 ವರ್ಷಗಳಿಂದ ಕಠಿಣ ಪರಿಶ್ರಮ ವಹಿಸಿ ಗಡಿಯಾರವನ್ನು ಪ್ರಸ್ತುತಪಡಿಸಿದ್ದಾರೆ. ವಿಶೇಷವೆಂದರೆ ಈ ಗಡಿಯಾರವು ಏಕಕಾಲದಲ್ಲಿ ಭಾರತ, ಮೆಕ್ಸಿಕೊ, ಜಪಾನ್, ಟೋಕಿಯೊ, ದುಬೈ, ವಾಷಿಂಗ್ಟನ್ ಸೇರಿದಂತೆ 9 ದೇಶಗಳ ಸಮಯವನ್ನು ತೊರಿಸುತ್ತದೆ. ಜೊತೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಕೂಡ ಪಡೆದಿದೆ.
ಈ ವಿಶ್ವ ಗಡಿಯಾರವನ್ನು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಇರಿಸಲು ತರಕಾರಿ ವ್ಯಾಪಾರಿಯು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬಳಿ ವಿನಂತಿಸಿದ್ದಾರೆ. ಚಂಪತ್ ರೈ ಅವರು ಇದನ್ನು ಕರಸೇವಕ ಪುರಂನಲ್ಲಿರುವ ಕಚೇರಿಯಲ್ಲಿ ಸ್ವೀಕರಿಸಿದ್ದಾರೆ.
ಅನಿಲ್ ಕುಮಾರ್ ಸಾಹು ಅವರು ರಾಮ ಜನ್ಮಭೂಮಿಯಲ್ಲದೆ, ಪ್ರಸಿದ್ದ ಸಿದ್ದ ಪೀಠ ಹನುಮಾನ್ ಗರ್ಹಿ ಮತ್ತು ಅಯೋಧ್ಯೆ ಜಂಕ್ಷನ್ ರೈಲು ನಿಲ್ದಾಣಕ್ಕೂ ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ.