ಮಹಾರಾಷ್ಟ್ರ: ಸಹಾಯಕ ಪೊಲೀಸ್ ಆಯುಕ್ತ ಭರತ್ ಗಾಯಕ್ವಾಡ್(57) (ಎಸಿಪಿ) ತನ್ನ ಪತ್ನಿ ಮತ್ತು ಸೋದರಳಿಯನನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ಸೋಮವಾರ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬನೇರ್ ಪ್ರದೇಶದ ಎಸಿಪಿ ಭರತ್ ಗಾಯಕ್ವಾಡ್ ಅವರ ಬಂಗಲೆಯಲ್ಲಿ ಮುಂಜಾನೆ 3.30 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಹಿಂದಿನ ಕಾರಣ ಬಹಿರಂಗವಾಗಿಲ್ಲ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
‘ಗಾಯಕ್ವಾಡ್ ಅಮರಾವತಿಯಲ್ಲಿ ಎಸಿಪಿಯಾಗಿ ನೇಮಕಗೊಂಡಿದ್ದರು. ‘ಸೋಮವಾರ ಮುಂಜಾನೆ 3.30 ರ ಸುಮಾರಿಗೆ, ಎಸಿಪಿ ಮೊದಲು ತನ್ನ ಹೆಂಡತಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ಶಬ್ದ ಕೇಳಿ ಅವರ ಮಗ ಮತ್ತು ಸೋದರಳಿಯ ಓಡಿ ಬಂದು ಬಾಗಿಲು ತೆರೆದರು. ಅವರು ಬಾಗಿಲು ತೆರೆದ ಕ್ಷಣ, ಎಸಿಪಿ ತನ್ನ ಸೋದರಳಿಯನ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಗಾಯಕ್ವಾಡ್ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ’ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಪೊಲೀಸ್ ಅಧಿಕಾರಿಯ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.