ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ತೆಲಂಗಾಣದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಅಂಬಾನಿಗೆ ಕಳೆದ ವಾರ ಮೂರು ಬೆದರಿಕೆ ಇ-ಮೇಲ್ ಬಂದಿದ್ದು, ಪ್ರತಿಯೊಂದರಲ್ಲಿಯೂ ಭಾರಿ ಮೊತ್ತದ ಹಣಕ್ಕೆ ಬೇಡಿಕೆಯಿಡಲಾಗಿತ್ತು. ಬೆದರಿಕೆ ಹಾಕಿದ ಆರೋಪಿಯನ್ನು ಗಣೇಶ್ ರಮೇಶ್ ವನಪರ್ಡಿ ಎಂದು ಗುರುತಿಸಲಾಗಿದ್ದು, ಆತನನ್ನು ನವೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಶುಕ್ರವಾರ ಅಪರಿಚಿತ ವ್ಯಕ್ತಿಯಿಂದ ₹ 20 ಕೋಟಿ ನೀಡುವಂತೆ ಕೋರಿ ಮೊದಲ ಇಮೇಲ್ ಬಂದಿತ್ತು. ನಂತರ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಅಕ್ಟೋಬರ್ 27 ರಂದು ಮುಂಬೈನಲ್ಲಿ ದೂರು ದಾಖಲಿಸಲಾಗಿತ್ತು. ನಂತರ ಮರುದಿನ ₹ 200 ಕೋಟಿ ಬೇಡಿಕೆಯಿಟ್ಟು ಮತ್ತೊಂದು ಇ-ಮೇಲ್ ಬಂದಿತ್ತು. ಬಳಿಕ ₹ 400 ಕೋಟಿ ಕೊಡಬೇಕು ಇಲ್ಲದಿದ್ದಲ್ಲಿ ಸಾಯಿಸುವುದಾಗಿ ಇ ಮೇಲ್ ಬಂದಿತ್ತು.