ಮುಂಬೈ: ಐಶ್ವರ್ಯ ರೈ ಅವರಂತೆ ನಿಮ್ಮ ಕಣ್ಣುಗಳು, ಕಾಂತಿಯುತವಾಗಿ ಹೊಳೆಯಲು ಪ್ರತಿ ದಿನವೂ ಮೀನು ಸೇವಿಸುವಂತೆ ಮಹಾರಾಷ್ಟ್ಟದ ಬುಡಕಟ್ಟು ಸಚಿವ ವಿಜಯಕುಮಾರ್ ಗವಿತ್ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ನಂದೂರ್ಬಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ‘ದಿನನಿತ್ಯ ಮೀನು ಸೇವಿಸುವವರ ತ್ವಚೆ ಮೃದುವಾಗಿರುತ್ತದೆ ಮತ್ತು ಅವರ ಕಣ್ಣುಗಳು ಹೊಳಪಿನಿಂದ ಕೂಡಿರುತ್ತವೆ. ಹೊಳೆಯುವ ಕಣ್ಣುಗಳತ್ತ ಜನರು ಹೆಚ್ಚು ಆಕರ್ಷಿತರಾಗುತ್ತಾರೆ’ ಎಂದರು.
‘ನಾನು ನಿಮಗೆ ಐಶ್ವರ್ಯ ರೈ ಅವರ ಬಗ್ಗೆ ಹೇಳಲಾ? ನೀವು ಎಂದಾದರೂ ಆಕೆಯ ಕಣ್ಣುಗಳನ್ನು ನೋಡಿದ್ದೀರಾ? ಅವರು ಮಂಗಳೂರಿನ ಕಡಲ ತೀರದಲ್ಲಿ ವಾಸವಿದ್ದು, ಪ್ರತಿದಿನ ಮೀನು ಸೇವಿಸುತ್ತಿದ್ದರು. ದಿನಾ ಮೀನು ಸೇವಿಸಿದರೆ ನೀವು ಅವರಂತೆ ಕಣ್ಣುಗಳನ್ನು ಹೊಂದಬಹುದು. ಮೀನಿನಲ್ಲಿ ವಿಶೇಷವಾದ ಎಣ್ಣೆಯಂಶವಿದ್ದು, ಅದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ’ ಎಂದು ತಿಳಿಸಿದ್ದಾರೆ.
ಗವಿತ್ ಅವರ ಹೇಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಐಶ್ವರ್ಯ ರೈ ಕಣ್ಣುಗಳನ್ನು ಬಿಟ್ಟು ರಾಜ್ಯದ ಜಲ್ದರು ಸಮಸ್ಯೆ ಕಡೆ ಗಮನ ಹರಿಸುವಂತೆ ನೆಟ್ಟಿಗರು ಕುಟುಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ಮುಖಂಡ ಅಮೋಲ್ ಮಿಟಕಾರಿ ಮಂತ್ರಿಗಳು ಬುಡಕಟ್ಟು ಜನರ ಸಮಸ್ಯೆ ಬಗೆಹಹರಿಸುವ ಬದಲಿಗೆ ಇಂತಹ ಅಲ್ಲ ಸಲ್ಲದ ಹೇಳಿಕೆ ನೀಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 68 ವರ್ಷದ ವಿಜಯ್ ಕುಮಾರ್ ಗವಿತ್ ಅವರ ಪುತ್ರಿ ಹೀನಾ ಕೂಡ ಸಂಸದೆಯಾಗಿದ್ದಾರೆ.