ಮುಂಬೈ : ಬಲವಂತದ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದಕ್ಕೆ 33 ವರ್ಷದ ಮಹಿಳೆಯನ್ನು ಕೊಂದು ಆಕೆಯ ಮನೆಯ ಸೋಫಾ ಕಮ್ ಬೆಡ್ನಲ್ಲಿ ತುಂಬಿಟ್ಟಿದ್ದ 25 ವರ್ಷದ ಯುವಕನನ್ನು ಮಹಾರಾಷ್ಟ್ರದ ದೊಂಬಿವಾಲಿಯಲ್ಲಿರುವ ಮಾಂಪಡ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ವಿಶಾಲ್ ಘಾವತ್ ಮತ್ತು ಕೊಲೆಯಾದ ಮಹಿಳೆಯನ್ನು ಸುಪ್ರಿಯಾ ಕಿಶೋರ್ ಶಿಂಧೆ ಎಂದು ಗುರುತಿಸಲಾಗಿದೆ. ಫೆ. 15ರಂದು ದೊಂಬಿವಾಲಿಯ ಡೇವಿಡ್ಗೌನ್ ಏರಿಯಾದಲ್ಲಿರುವ ನಿವಾಸದಲ್ಲಿ ಸುಪ್ರಿಯಾ ಕೊಲೆಯಾಗಿತ್ತು. ಸೋಫಾ ಕಮ್ ಬೆಡ್ನಲ್ಲಿ ತುಂಬಿಡಲಾಗಿದ್ದ ಆಕೆಯ ಮೃತದೇಹವನ್ನು ಪತಿ ಮತ್ತು ಮಗ ಪತ್ತೆಹಚ್ಚಿದ್ದರು.
ಇನ್ನು ಆರೋಪಿ ವಿಶಾಲ್ ಮೃತ ಮಹಿಳೆಯ ಪಕ್ಕದ ಮನೆಯ ನಿವಾಸಿ. ಪರಸ್ಪರ ಪರಿಚಿತರಾಗಿದ್ದರು. ಶಿಂಧೆ ಮನೆಯಲ್ಲಿ ಒಬ್ಬರೇ ಇರುವಾಗ ಆಕೆಯ ಮೇಲೆ ವಿಶಾಲ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿರೋಧಸಿದಕ್ಕೆ ಕೋಪಗೊಂಡು ಚೂಪಾದ ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದು ಮತ್ತು ನೈಲಾನ್ ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಸುಪ್ರಿಯಾ ಅವರ ಮನೆಯ ಹೊರಭಾಗದಲ್ಲಿ ಬಿಟ್ಟಿದ್ದ ಚಪ್ಪಲಿಯನ್ನು ನೋಡಿದ್ದ ಸಾಕ್ಷಿದಾರರೊಬ್ಬರ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಜೆಡಿ ಮೋರ್ ಹೇಳಿದ್ದಾರೆ. ಇನ್ನು ಕೊಲೆಯಾದ ಫೆ.15ರಂದು ಸುಪ್ರಿಯಾ ಗಂಡ ಕೆಲಸಕ್ಕೆಂದು ಎಂದಿನಂತೆ ಮನೆ ಬಿಟ್ಟಿದ್ದ. ಇತ್ತ ಮಗನು ಕೂಡ 12.30 ಶಾಲೆಗೆ ತೆರಳಿದ್ದ.
ಕೊಲೆಯಾದ ಬಳಿಕ ಅಕ್ಕಪಕ್ಕದ ಮನೆಯವರ ವಿಚಾರಣೆ ನಡೆಸಿದಾಗ ಸುಪ್ರಿಯಾ ಮನೆಯ ಹೊರಭಾಗದಲ್ಲಿ ಚಪ್ಪಲಿಯನ್ನು ನೋಡಿದ್ದಾಗಿ ಹೇಳಿದರು. ಅಲ್ಲದೆ, ಯಾವ ರೀತಿಯ ಚಪ್ಪಲಿ ಎಂಬುದನ್ನು ಸಹ ವಿವರಿಸಿದ್ದರು. ಇದನ್ನು ಕೇಳಿ ಸುಪ್ರಿಯಾ ಪತಿ ಆ ಚಪ್ಪಲಿಗಳು ವಿಶಾಲ್ನದ್ದು ಎಂದು ಗುರುತಿಸಿದ್ದರು. ಅನೇಕ ಸಂದರ್ಭದಲ್ಲಿ ಅದೇ ರೀತಿಯ ಚಪ್ಪಲಿಯನ್ನು ಧರಿಸಿ ವಿಶಾಲ್ ಸುಪ್ರಿಯಾ ಮನೆಗೆ ಬಂದಿದ್ದ. ಇದಾದ ಬಳಿಕ ವಿಶಾಲ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಕೊಲೆ ಮಾಡಿದ ಹಿಂದಿನ ದಿನ ಅಂದರೆ ಫೆ. 14ರಂದು ಪುಸ್ತಕ ಕೊಡುವ ನೆಪದಲ್ಲಿ ಆರೋಪಿ ವಿಶಾಲ್, ಸುಪ್ರಿಯಾ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಆಕೆಯ ಮಗನನ್ನು ನೋಡಿ ಶಾಲೆಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದ. ಬಳಿಕ ವಾಪಸ್ಸು ಹೋಗಿದ್ದ. ಇದಾದ ಮಾರನೇ ದಿನ ಅಂದರೆ ಫೆ. 15ರಂದು ಮಧ್ಯಾಹ್ನ 1.30ರ ಸುಮಾರಿಗೆ ಮತ್ತೆ ಸುಪ್ರಿಯಾ ಮನೆಗೆ ಪುಸ್ತಕ ಹಿಡಿದು ಭೇಟಿ ನೀಡಿದ್ದ. ಈ ವೇಳೆ ಸುಪ್ರಿಯಾ ಒಬ್ಬಳೇ ಇರುವುದನ್ನು ನೋಡಿದ ವಿಶಾಲ್ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಆತನನ್ನು ವಿರೋಧಿಸಿ ಕೂಗುತ್ತಾ ಬಾಗಿಲ ಬಳಿಗೆ ಆಕೆ ಓಡುವುದನ್ನು ನೋಡಿದ ವಿಶಾಲ್, ಕೂದಲನ್ನು ಹಿಡಿದೆಳೆದು ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ನೈಲಾನ್ ಹಗ್ಗದಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಸೋಫಾ ಕಂ ಬೆಡ್ ಒಳಗೆ ತುಂಬಿಟ್ಟು ಮನೆಯ ಬಾಗಿಲು ಮುಚ್ಚಿ ಸುಮ್ಮನೇ ಬಂದಿದ್ದಾನೆ.
ಸುಪ್ರಿಯಾ ಪತಿ ಮನೆಗೆ ಬಂದಾಗ ಆಕೆ ಕಾಣದಿದ್ದನ್ನು ನೋಡಿ ಹುಡುಕಾಡಿದ್ದಾನೆ. ಎಲ್ಲಿಯೂ ಪತ್ತೆಯಾಗದಿದ್ದಾಗ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ಆಘಾತಕಾರಿ ಎಂದರೆ, ನಾಪತ್ತೆ ದೂರು ದಾಖಲಿಸುವಾಗ ಸುಪ್ರಿಯಾ ಪತಿಯ ಜತೆಯಲ್ಲೇ ಆರೋಪಿ ವಿಶಾಲ್ ಕೂಡ ಜತೆಗೆ ಬಂದಿದ್ದ. ತನಗೇನು ಗೊತ್ತೇ ಇಲ್ಲ ಎಂಬಂತೆ ನಟನೆ ಮಾಡಿದ್ದ.
ಇದಾದ ಬಳಿಕ ಸುಪ್ರಿಯಾ ಪತಿ ಮತ್ತು ಮಗ ಮನೆಯಲ್ಲಿ ಇರುವಾಗ ಸೋಫಾ ಕಂ ಬೆಡ್ ಏರುಪೇರಾಗಿರುವುದನ್ನು ಗಮನಿಸಿದ್ದಾರೆ. ಅದನ್ನು ಸರಿಪಡಿಸಲು ಹೋಗಿ ನೋಡಿದಾಗ ಆಕೆಯ ಮೃತದೇಹ ಅದರೊಳಗೆ ಇರುವುದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ವಿಚಾರಣೆ ನಡೆಸಿದಾಗ ವಿಶಾಲ್ ಕೊಲೆ ಮಾಡಿರುವುದು ಎಂದು ಗೊತ್ತಾಗಿದ್ದು, ಆತನನ್ನು ಬಂಧಿಸಲಾಗಿದೆ.