ನಾಗ್ಪುರ: ಮೊಬೈಲ್ ಫೋನ್ ಒಡೆದು ಹಾಕಿದನೆಂಬ ಕಾರಣಕ್ಕೆ ಕೂಲಿ ಕಾರ್ಮಿಕನೊಬ್ಬನನ್ನು ಹದಿಹರೆಯದ ಹುಡುಗನೊಬ್ಬ ಹತ್ಯೆ ಮಾಡಿದ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ ಹತ್ಯೆಯಾದ ವ್ಯಕ್ತಿಯನ್ನು ಸಾಲಿರಾಮ್ ಅಲಿಯಾಸ್ ರಿಂಕು ಕುಮಾರ್ (31 ವರ್ಷ) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿ ಹದಿಹರೆಯದ ಹುಡುಗನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಹಾಗೂ ಕೊಲೆ ಆರೋಪಿ ಮೂಲತಃ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯವರಾಗಿದ್ದು, ನಗರದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಹಳ್ಳಿಯಲ್ಲಿರುವ ತನ್ನ ಸಂಬಂಧಿಕರಿಗೆ ಫೋನ್ ಮಾಡಲು ರಿಂಕು ಕುಮಾರ್ ಹದಿಹರೆಯದವನ ಬಳಿ ಮೊಬೈಲ್ ಫೋನ್ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ವಲ್ಪ ಸಮಯದ ನಂತರ ಕುಮಾರ್ ಹದಿಹರೆಯದವನ ಮೊಬೈಲ್ ಫೋನ್ನಿಂದ ತನ್ನೂರಿಗೆ ಕರೆ ಮಾಡಿದ್ದಾನೆ. ನಂತರ ಮೊಬೈಲ್ ಅನ್ನು ನೆಲಕ್ಕೆ ಬಡಿದು ಪುಡಿಗಟ್ಟಿದ್ದಾನೆ. ಇದರಿಂದ ಕೋಪಗೊಂಡ ಹದಿಹರೆಯದ ಹುಡುಗ ಕುಮಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.