ಪುಣೆ: ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಶನಿವಾರ ಸಂಭವಿಸಿದ್ದ ಅಗ್ನಿ ದುರಂತದಲ್ಲಿ, ಹೊಗೆಯು ವಾರ್ಡ್ಗೆ ವ್ಯಾಪಿಸಿದ್ದರಿಂದ ಕೆಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದರು.
‘ಕೆಲವರು ಬೆಂಕಿ ಅವಘಡದಲ್ಲಿ ಮೃತಪಟ್ಟರೆ, ಕೆಲವರು ಹೊಗೆ ವ್ಯಾಪಿಸಿ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿದ್ದು, ಹೆಚ್ಚಿನ ತನಿಖೆ ಆರಂಭವಾಗಿದೆ’ ತೋಪ್ಖಾನಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಜುಬರ್ ಮುಜಾವರ್ ಭಾನುವಾರ ಹೇಳಿದರು.
ಪುಣೆಯಿಂದ 20 ಕಿ.ಮೀ. ದೂರದ ಅಹ್ಮದ್ನಗರದ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಶನಿವಾರ ಅವಘಡ ಸಂಭವಿಸಿತ್ತು. ವಾರ್ಡ್ನಲ್ಲಿ ಹಿರಿಯ ನಾಗರಿಕರು ಇದ್ದರು. ಕೆಲವರಿಗೆ ವೆಂಟಿಲೇಟರ್ ಅಥವಾ ಆಮ್ಲಜನಕದ ಚಿಕಿತ್ಸೆ ಪಡೆಯುತ್ತಿದ್ದು, 17 ಮಂದಿ ಕೋವಿಡ್ ರೋಗಿಗಳಿದ್ದರು.
ಮೃತರಲ್ಲಿ ಒಬ್ಬರ ಗುರುತು ಪತ್ತೆಯಾಗಬೇಕಿದೆ. ಈ ಸಂಬಂಧ ಐಪಿಸಿ ಸೆಕ್ಷನ್ 304 (ಎ) (ನಿರ್ಲಕ್ಷದಿಂದ ಸಾವಿಗೆ ಕಾರಣ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಹ್ಮದ್ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಟೀಲ್ ಹೇಳಿದರು.