ಭೋಪಾಲ್: ಕುಂದಾಪುರದಲ್ಲಿ ಭಾನುವಾರ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದರು. ಇದೀಗ ಮಧ್ಯಪ್ರದೇಶದ ವಿವಿಧ ಸ್ಥಳಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಧಾರ್ ಜಿಲ್ಲೆಯ ಉಮರ್ಬನ್ ಗ್ರಾಮದಲ್ಲಿ ಭಾನುವಾರ ಸಂಜೆ ದಂಪತಿಗಳು ಮತ್ತು ಅವರ ಮಗನೊಂದಿಗೆ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದಿದೆ. ಪರಿಣಾಮ ಮುಖೇಶ್(28) ಮತ್ತು ಅವರ ಪತ್ನಿ ಚಂಪಾ(27) ಸ್ಥಳದಲ್ಲೇ ಮೃತಪಟ್ಟರೆ, ಅವರ 10 ವರ್ಷದ ಮಗನಿಗೆ ಗಂಭೀರವಾದ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಝಬುವಾ ಜಿಲ್ಲೆಯಲ್ಲಿ, 45 ವರ್ಷದ ವ್ಯಕ್ತಿಯೊಬ್ಬರು ಸಿಡಿ ಬಡಿದು ಮೃತಪಟ್ಟಿದ್ದಾರೆ.
ಅವರು ಭಾನುವಾರ ಸಂಜೆ ಜವಾಲಿಯಾ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಪೆಟ್ಲವಾಡ್ ಪೊಲೀಸ್ ಉಪವಿಭಾಗಾಧಿಕಾರಿ ಸೌರಭ್ ತೋಮರ್ ಅವರು ತಿಳಿಸಿದ್ದಾರೆ. ಅಲ್ಲದೆ, ಬರ್ವಾನಿ ಜಿಲ್ಲೆಯ ಜುನಾಜಿರಾ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು 48 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.