ಯಾರಾದರೂ ಕಾಶಿ ವಿಶ್ವನಾಥನ ದರ್ಶನಕ್ಕೆ ಹೊರಟಿದ್ದರೆ, ಈ ಮೂರು ದಿನಗಳನ್ನು ಬಿಟ್ಟು ಪ್ಲ್ಯಾನ್ ಮಾಡುವುದು ಒಳ್ಳೆಯದು. ಹೌದು, ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿ ದೇವಸ್ಥಾನ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ.
ಕಾಶಿ ವಿಶ್ವನಾಥ ಕಾರಿಡಾರ್ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಭಾಗಶಃ ಮತ್ತು ಒಂದು ದಿನ ಸಂಪೂರ್ಣವಾಗಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನವೆಂಬರ್ 29 ಮತ್ತು 30 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ದೇವಾಲಯವನ್ನು ಭಾಗಶಃ ಹಾಗೂ ಡಿಸೆಂಬರ್ 1ರಂದು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಡಿಸೆಂಬರ್ 2ರಿಂದ ಎಂದಿನಂತೆ ದೇವಾಲಯ ತೆರೆಯಲಿದೆ.
ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ್ ಕಾರಿಡಾರ್ ನಿರ್ಮಾಣ ಅಂತಿಮ ಹಂತದಲ್ಲಿದೆ. ಪ್ರಧಾನಿಯವರು ಡಿಸೆಂಬರ್ ಎರಡನೇ ವಾರದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ. ಅದಕ್ಕಾಗಿ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ.
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ₹ 800 ಕೋಟಿ ವೆಚ್ಚದ್ದಾಗಿದೆ. ಈ ಯೋಜನೆ ಉದ್ಘಾಟನೆ ಬಳಿಕ ಕಾಶಿ ವಿಶ್ವನಾಥನ ದೇವಾಲಯ ಬೇರೆಯದೇ ರೂಪದಲ್ಲಿ ಕಾಣಿಸಲಿದೆ. ಅನುಮೋದಿತ 24 ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದು, ಮುಕ್ತಾಯ ಹಂತದಲ್ಲಿದೆ. ಒಟ್ಟು 52,000 ಚದರ ಮೀಟರ್ನಲ್ಲಿ ನಿರ್ಮಿಸಲಾಗುತ್ತಿರುವ ಕಾರಿಡಾರ್ನ ಕಟ್ಟಡಗಳ ಜೊತೆಗೆ, ದೇವಾಲಯದ ಸಂಕೀರ್ಣದ ಎಲ್ಲ ನಾಲ್ಕು ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.
ಕಾಶಿ ವಿಶ್ವನಾಥನ ದೇವಾಲಯವು ಈ ಕಾರಿಡಾರ್ ಮೂಲಕ ನೇರವಾಗಿ ಗಂಗಾ ತೀರಕ್ಕೆ ಸಂಪರ್ಕ ಹೊಂದಿದೆ. ಯೋಜನೆ ಪೂರ್ಣಗೊಂಡ ಬಳಿಕ, ವಿಶ್ವನಾಥ ಧಾಮಕ್ಕೆ ಬರುವ ಭಕ್ತರು ಗಂಗಾ ಸ್ನಾನದ ನಂತರ ನೇರವಾಗಿ ದೇವಾಲಯದ ಪ್ರದೇಶವನ್ನು ಪ್ರವೇಶಿಸುತ್ತಾರೆ.