ನೀಮುಚ್: ಮಾನಸಿಕ ಅಸ್ವಸ್ಥರಾದ ಹಿರಿಯ ನಾಗರಿಕರೊಬ್ಬನ್ನು ತನ್ನ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ ಆರೋಪಿಯನ್ನು ಮಧ್ಯಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಾನಸದ ನಿವಾಸಿ ದಿನೇಶ್ ಕುಶ್ವಾಹ (38) ಬಂಧಿತ ಆರೋಪಿ. ಕೊಲೆಯಾದ ಹಿರಿಯ ನಾಗರಿಕ ಭವಾರ್ಲಾಲ್ ಜೈನ್ (65) ರಟ್ಲಾಮ್ ಜಿಲ್ಲೆಯ ಸರಸಿ ಗ್ರಾಮದ ನಿವಾಸಿ. ಇವರು ಮೇ 16ರಂದು ಚಿತ್ತೋರ್ಗಢದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋದ ಮೇಲೆ ನಾಪತ್ತೆಯಾಗಿದ್ದರು. ಇವರ ಶವ ಗುರುವಾರ ಸಂಜೆ ನೀಮುಚ್ ಜಿಲ್ಲೆಯ ಮಾನಸ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಪುರ ರಸ್ತೆಯಲ್ಲಿ ಸಿಕ್ಕಿತ್ತು.
ಆರೋಪಿಯು, ಭವಾರ್ಲಾಲ್ ಜೈನ್ ಅವರಿಗೆ ‘ನೀನು ಮೊಹಮ್ಮದ್’ ಎಂದು ಹೆಸರಿಸಿ, ಗುರುತಿಗೆ ಆಧಾರ್ ಕಾರ್ಡ್ ತೋರಿಸಲು ಒತ್ತಾಯಿಸಿ ಪದೇ ಪದೇ ಕಪಾಳಮೋಕ್ಷ ಮಾಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಶವ ಸಂಸ್ಕಾರದ ಬಳಿಕ ಕುಟುಂಬ ಸದಸ್ಯರಿಗೆ ಜೈನ್ ಅವರ ಮೇಲೆ ಉದ್ದೇಶಪೂರ್ವಕ ಹಲ್ಲೆ ನಡೆದಿರುವ ದೃಶ್ಯದ ವಿಡಿಯೊ ಲಭಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಹುಶಃ ಈ ವಿಡಿಯೊ ಮೇ 19ರಂದು ಚಿತ್ರೀಕರಿಸಲಾಗಿದೆ. ತನಿಖೆ ನಡೆಸಿದಾಗ ಆರೋಪಿಯ ಗುರುತು ಸಿಕ್ಕಿ, ಬಂಧಿಸಲಾಗಿದೆ ಎಂದು ಮಾನಸ ಪೊಲೀಸ್ ಠಾಣೆಯ ಪ್ರಭಾರಿ ಕೆ.ಎಲ್. ಡಾಂಗಿ ತಿಳಿಸಿದ್ದಾರೆ.
ಆರೋಪಿ ಬಿಜೆಪಿಯ ಕಾರ್ಯಕರ್ತ ಎಂದು ಸಂಸದ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಟ್ವಿಟರ್ನಲ್ಲಿ ಆರೋಪಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ನಾಥ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.