ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಲ್ಯಾಬ್ ಅಸಿಸ್ಟೆಂಟ್ ಆಗಿರುವ ವೈಶಾಲಿ ವಿಲ್ಸನ್ ಅವರ ಮಗಳು ಸೃಷ್ಟಿ ಉಕ್ರೇನ್ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮಗಳ ರಕ್ಷಣೆಗಾಗಿ ಆಕೆ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಮನವಿ ಮಾಡಿದ್ದಾರೆ. ಆಕೆಯ ಪರಿಸ್ಥಿತಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ದುಷ್ಕರ್ಮಿ ಪ್ರಿನ್ಸ್ ಎಂದು ಕರೆಸಿಕೊಂಡ ವ್ಯಕ್ತಿ ತಾನು ಪಿಎಂಒ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಪರಿಚಯಿಸಿಕೊಂಡು ತಮ್ಮ ಮಗಳಿಗೆ ನೆರವಾಗುವುದಾಗಿ 42,000 ರೂ.ಗಳನ್ನು ಬ್ಯಾಂಕ್ಗೆ ವರ್ಗಾಯಿಸುವಂತೆ ಹೇಳಿದ್ದಾನೆ.
ವಿಮಾನದ ಟಿಕೆಟ್ಗಾಗಿ ಎಂದು ಹಣ ಕೇಳಿದ್ದು, ತಾಯಿಯು ಅನುಮಾನ ಮಾಡದೇ ತಕ್ಷಣ ಹಣ ಕಳುಹಿಸಿದ್ದಾರೆ. ಆದರೆ ಆತನಿಂದ ಪ್ರತಿಕ್ರಿಯೆ ಸಿಗದಿದ್ದಾಗ ಆ ತಾಯಿ ಗಾಬರಿಯಾಗಿದ್ದಾರೆ.
ಅವರು ನೀಡಿದ ಸಂಖ್ಯೆಗೆ ಹಲವಾರು ಬಾರಿ ಕರೆ ಮಾಡಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ನನ್ನ ಖಾತೆಗೆ 5,000 ರೂ. ಮತ್ತು ನಕಲಿ ರಸೀದಿಗಳನ್ನು ಕಳುಹಿಸಿದ್ದಾನೆ ಎಂದು ವೈಶಾಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಳಿಕ ಆಕೆ ಕೆಲವು ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಪಿಎಂಒದಲ್ಲಿ ಅಂತಹ ವ್ಯಕ್ತಿ ಇಲ್ಲ ಎಂದು ಅವರು ಹೇಳಿದರು. ನಂತರ ಪೊಲೀಸರಿಗೆ ದೂರು ನೀಡಿದರು.
ದೆಹಲಿಯಲ್ಲಿ ಪ್ರಿನ್ಸ್ ಇರುವ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದ್ದು, ಎಫ್ಐಆರ್ ದಾಖಲಾಗಿದ್ದು, ಆತನ ಪತ್ತೆಗೆ ತಂಡಗಳನ್ನು ಕಳುಹಿಸಲಾಗಿದೆ ಎಂದು ಎಸ್ಪಿ ಮೋನಿಕಾ ಶುಕ್ಲಾ ತಿಳಿಸಿದ್ದಾರೆ. ನಾವು ಆತನ ಬ್ಯಾಂಕ್ ಖಾತೆ ಸೀಜ್ ಮಾಡಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ವೈಶಾಲಿಯವರಿಗೆ ಕರೆ ಮಾಡಿ, ಸೃಷ್ಟಿಯನ್ನು ಮನೆಗೆ ಕರೆತರಲು ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಿದರು.