ಶಬರಿಮಲೆ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವಳದ ಪ್ರಧಾನ ಪ್ರಸಾದಗಳಾದ ಅಪ್ಪಂ, ಅರವಣ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.
ಬೆಲ್ಲದ ಕೊರತೆಯಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಉತ್ಪಾದನೆ ಶನಿವಾರ ಬೆಳಗ್ಗಿನಿಂದ ಒಬ್ಬ ಯಾತ್ರಿಕನಿಗೆ ಕೇವಲ ಐದು ಬಾಟಲಿ ಅರವಣ ಮತ್ತು ಐದು ಪ್ಯಾಕೆಟ್ ಅಪ್ಪಂ ನೀಡಲಾಗುತ್ತಿದೆ. ಇದು ಯಾತ್ರಾರ್ಥಿಗಳ ಪ್ರತಿಭಟನೆಗೂ ಕಾರಣವಾಗಿದೆ.
ಪ್ರಸಾದ ತಯಾರಿಗೆ ಬೇಕಾದ ಬೆಲ್ಲ ಪೂರೈಸಲು ಗುತ್ತಿಗೆ ಪಡೆದಿರುವ ಕಂಪನಿ ಮಹಾರಾಷ್ಟ್ರದಿಂದ ಬೆಲ್ಲ ತರುತ್ತಿದೆ. ಅಲ್ಲಿ ಕಬ್ಬಿನ ತೀವ್ರ ಅಭಾವದಿಂದ ಎರಡು ವಾರಗಳಿಂದ ಬೆಲ್ಲ ಬರುವುದು ಸ್ಥಗಿತಗೊಂಡಿದೆ. ಕಬ್ಬಿನ ಅಭಾವ ಉಲ್ಬಣಗೊಂಡ ಕಾರಣ ಗುತ್ತಿಗೆ ಕಂಪನಿ ಪ್ರತಿ ಕೆಜಿಗೆ 42 ರೂ. ಬದಲಾಗಿ 47 ರೂ. ನೀಡುವಂತೆ ದೇವಸ್ವಂ ಮಂಡಳಿಯನ್ನು ಕೋರಿದ್ದರೂ ಮಂಡಳಿ ಈ ಬೇಡಿಕೆಯನ್ನು ತಿರಸ್ಕರಿಸಿದೆ.
ಮುಕ್ತ ಮಾರುಕಟ್ಟೆಯಿಂದ ಬೆಲ್ಲ ತಂದು ಸಮಸ್ಯೆ ಬಗೆಹರಿಸಲು ಯತ್ನಿಸಿದೆ. ಇದು ಫಲ ನೀಡದಾಗ ಅಪ್ಪಂ ಮತ್ತು ಅರವಣ ಮಾರಾಟಕ್ಕೆ ನಿರ್ಬಂಧ ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಪ್ಪಂ ಮತ್ತು ಅರವಣ ಮಾರಾಟಕ್ಕೂ ನಿರ್ಬಂಧ ಮುಂದುವರಿಸುವ ಸಾಧ್ಯತೆಯಿದೆ.