ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಕರವಿಳಕ್ಕು ಮಹೋತ್ಸವ ಸೋಮವಾರ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ‘ಮಕರ ಜ್ಯೋತಿ’ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಕರವಿಳಕ್ಕು ಮಹೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಾವಿರಾರು ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ ಎಂದಿದ್ದಾರೆ. ಇನ್ನು ದೀಪಾರಾಧನೆಯಾದ ಬಳಿಕ ದೇಗುಲದಿಂದ ಎಂಟು ಕಿ.ಮೀ. ದೂರದ ಪೊನ್ನಂಬಲಮೇಡು ಬೆಟ್ಟದ ಕಾಡಿನೊಳಗಿನಿಂದ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.
ಮಕರಜ್ಯೋತಿ ವಿಕ್ಷಣೆಗಾಗಿ ಶಬರಿಮಲೆಯ ಸುತ್ತಮುತ್ತ 10 ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ನೀಡುವ ಸೂಚನೆಗಳನ್ನು ಭಕ್ತರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ತಿರುವಾಭರಣ (ಪವಿತ್ರ ಆಭರಣಗಳು) ಮೆರವಣಿಗೆಯು ಮಕರವಿಳಕ್ಕು ಮಹೋತ್ಸವದಂದು ಸಂಜೆ ದೇವಾಲಯಕ್ಕೆ ತಲುಪಲಿದ್ದು, ಟಿಡಿಬಿ ಅಧಿಕಾರಿಗಳು ಅದನ್ನು ಸ್ವಾಗತಿಸುವರು. ದೀಪಾರಾಧನೆಗೂ ಮುನ್ನ ಅರ್ಚಕರು ಈ ಆಭರಣಗಳಿಂದ ದೇವರ ಮೂರ್ತಿಯನ್ನು ಅಲಂಕರಿಸುವರು ಎಂದು ವಿವರಿಸಿದ್ದಾರೆ.
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಅಂದಾಜು 80 ಲಕ್ಷ ಬಿಸ್ಕತ್ತುಗಳನ್ನು ನೀಡಿದ್ದು, ಅದನ್ನು ಭಕ್ತರಿಗೆ ವಿತರಿಸಲಾಗುವುದು ಎಂದಿದ್ದಾರೆ.