ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಇಸ್ರೇಲ್ನಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಇಸ್ರೇಲ್ ನಲ್ಲಿ 7 ಸಾವಿರ ಕೇರಳಿಗರಿದ್ದು, ಅವರ ಸುರಕ್ಷತೆ ಬಗ್ಗೆ ಖಾತ್ರಿ ವಹಿಸುವಂತೆ ಕೇಳಿಕೊಂಡಿದ್ದಾರೆ.
ಇಸ್ರೇಲ್ ನಲ್ಲಿರುವ ಕೇರಳಿಗರ ಸುರಕ್ಷತೆ ಬಗ್ಗೆ ಅವರ ಕುಟುಂಬಸ್ಥರು ತೀವ್ರ ಕಳವಳ ಹೊಂದಿದ್ದಾರೆ. ಯುದ್ಧದಿಂದ ಅವರು ಅಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಮಯದಲ್ಲಿ ಕೇರಳಿಗರ ಸುರಕ್ಷತೆ ಖಾತರಿಪಡಿಸಲು ಮಧ್ಯಪ್ರವೇಶಿಸುವಂತೆ ಕೋರುತ್ತೇನೆ ಎಂದು ಜಯಶಂಕರ್ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಕೇರಳದ ಬಹುಸಂಖ್ಯೆಯ ನರ್ಸ್ ಗಳು ಇಸ್ರೇಲ್ನಲ್ಲಿ ಉದ್ಯೋಗ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಿಎಂ ಪತ್ರ ಬರೆದಿರುವುದು ಮಹತ್ವ ಪಡೆದಿದೆ.
ಈ ನಡುವೆ ಕೇರಳದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೊಟ್ಟಾಯಂ ಮೂಲದ ಮಹಿಳೆಯ ಪತಿಯೊಬ್ಬರು ಐಎಎನ್ಎಸ್ ನೊಂದಿಗೆ ಮಾತನಾಡಿದ್ದು ನನ್ನ ಪತ್ನಿ ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿನ ಸರ್ಕಾರ ಎಲ್ಲರಿಗೂ ತೀವ್ರ ಎಚ್ಚರಿಕೆಯಿಂದ ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಇರಲು ಸಲಹೆ ನೀಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಮೊಬೈಲ್ನಲ್ಲಿ ಅಲರ್ಟ್ ಬರುತ್ತದೆ ಮತ್ತು ಸೈರನ್ಗಳನ್ನು ಮೊಳಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.